ಬಳ್ಳಾರಿ/ಗದಗ/ಬೆಳಗಾವಿ: ಮಂಗಳವಾರದಂದು ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಯ ಹಂಪಮ್ಮ ವಿರುಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರಿಂದ ಜರುಗಿತು.
ಸಾಮಾನ್ಯವಾಗಿ ನಾಡಿನೆಲ್ಲೆಡೆ ಒಂದೆ ರಥವನ್ನು ಎಳೆದು ರಥೋತ್ಸವ ಆಚರಿಸಿದ್ರೆ ಹಂಪಿಯಲ್ಲಿ ಮಾತ್ರ ಜೋಡಿ ರಥೋತ್ಸವ ನಡೆಯುವುದು ವಿಶೇಷ. ರಥೋತ್ಸವದ ಅಂಗವಾಗಿ ಹಂಪಿಯ ವಿರುಪಾಕ್ಷೇಶ್ವರರಿಗೆ ವಿಶೇಷವಾದ 8 ಕೆಜಿಯ ವಜ್ರ ಖಚಿತ ಕಿರೀಟ ಧಾರಣೆ ಮಾಡಲಾಗಿತ್ತು. ಸಂಜೆ ಜರುಗಿದ ರಥೋತ್ಸವದಲ್ಲಿ ನಾಡಿನ ಲಕ್ಷಾಂತರ ಭಕ್ತರು ಭಾಗವಹಿಸಿ ರಥವನ್ನು ಎಳೆದು ವಿರುಪಾಕ್ಷೇಶ್ವರನ ದರ್ಶನ ಪಡೆದರು. ಗದಗದ ಪ್ರಸಿದ್ಧ ತೋಂಟದಾರ್ಯ ಮಠದ ಜಾತ್ರೆ ಕೂಡ ವಿಜೃಂಭಣೆಯಿಂದ ನಡೆಯಿತು.
ಬೆಳಗಾವಿಯ ಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಗೋಕಾಕ್ನ ಹಿರೇನಂದಿ ಗ್ರಾಮದಲ್ಲಿ ನಡೆದಿದೆ. ಜಾತ್ರೆಯ ನೂಕುನುಗಲ್ಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ 55 ವರ್ಷದ ಕಲಯ್ಯ ಮಠದ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.