ಬೆಂಗಳೂರು: ನೀರಿನ ಸಂಪ್ ನೊಳಗೆ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ಕೆಲ ದಿನದ ಹಿಂದೆ ವಾಸವಿದ್ದ, ಆಂಧ್ರ ಪ್ರದೇಶದ ಕಲ್ಯಾಣದುರ್ಗ ಮೂಲದ ಈರಲಿಂಗಪ್ಪ ಕೊಲೆಯಾದ ದುರ್ದೈವಿ. ಪೊಲೀಸರು ಈರಲಿಂಗಪ್ಪನ ಪತ್ನಿ ಈಶ್ವರಮ್ಮನ್ನೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.
ಪತಿ ಈರಲಿಂಗಪ್ಪನನ್ನು ಕೊಂದು ಈಶ್ವರಮ್ಮ ನಂತರ ಪ್ರಕರಣವನ್ನ ಮುಚ್ಚಿಹಾಕಲು, ನೀರಿನ ಸಂಪ್ ನೊಳಗೆ ಹಾಕಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಸುಮಾರು ಮೂರ್ನಾಲ್ಕು ದಿನಗಳ ಹಿಂದೆಯೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದೇಹ ಸಂಪೂರ್ಣವಾಗಿ ಕೊಳೆತು ನಾರುತಿದ್ದು, ವಾಸನೆ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರತಿದಿನ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಜಗಳವಾಡುತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ ಹೆಂಡತಿ ಮೂರು-ನಾಲ್ಕು ದಿನದಿಂದ ನಾಪತ್ತೆಯಾಗಿರುವುದು ಇನ್ನಷ್ಟು ಅನುಮಾನಗಳಿಗೆ ಪುಷ್ಟಿ ನೀಡುವಂತೆ ಇದೆ. ಸದ್ಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತಿದ್ದಾರೆ.