ತುಮಕೂರು: 1 ಸಾವಿರ ರೂಪಾಯಿ ಸಾಲವನ್ನು ವಾಪಸ್ ನೀಡದ್ದಕ್ಕೆ ವ್ಯಕ್ತಿಯೊಬ್ಬರ ಬೆರಳನ್ನೇ ಕತ್ತರಿಸಿರುವ ಅಮಾನುಷ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ನಿಡುಹೊಳಲು ಗ್ರಾಮದ ನಿವಾಸಿ ಶಿವಣ್ಣ ಕೈ ಬೆರಳನ್ನು ಕಳೆದುಕೊಂಡ ವ್ಯಕ್ತಿ. ಶಿವಣ್ಣ ಅದೇ ಗ್ರಾಮದ ಕುಮಾರ್ ಎಂಬುವರಿಂದ ಕಳೆದ 15 ದಿನದ ಹಿಂದೆ ಒಂದು ಸಾವಿರ ರೂ. ಸಾಲ ಪಡೆದಿದ್ದರು.
ಭಾನುವಾರ ಕುಮಾರ್ ಸಾಲ ಹಿಂದಿರುಗಿಸುಂತೆ ಶಿವಣ್ಣಗೆ ತಾಕೀತು ಮಾಡಿದ್ದಾನೆ. ದುಡ್ಡು ಹೊಂದಿಸಲು ಆಗದೇ ಇದ್ದುದರಿಂದ ಇಂದು ಸೋಮವಾರ ಮರಳಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಕುಮಾರ್ ಹಾಗೂ ಆತನ ಪತ್ನಿ ವೀಣಾ ಶಿವಣ್ಣರ ಜೊತೆ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಪರಿಣಾಮ ಶಿವಣ್ಣನ ಬಲಗೈಯ ಮಧ್ಯದ ಬೆರಳು ತುಂಡಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಎದೆ ಭಾಗಕ್ಕೂ ಏಟಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.