ರಾಯಚೂರು: ನನ್ನ ಪತ್ನಿಯನ್ನ ನನ್ನ ಮನೆಗೆ ಕಳುಹಿಸಿ ಕೊಡಿ ಅಂತ ಪತಿಯೊಬ್ಬ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದೆ.
ಮಾನ್ವಿಯ ಗವಿಗಟ್ಟ ಗ್ರಾಮದ ಬಸವರಾಜ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಿರೇಕೊಟ್ನೆಕಲ್ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ ಬಸವರಾಜ್ ಪತ್ನಿಗೆ ಕೌಟುಂಬಿಕ ಕಲಹ ಹಿನ್ನೆಲೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗರ್ಭಿಣಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು.
ಬಸವರಾಜ್ ಪತ್ನಿಯ ತವರು ಮನೆಗೆ ತೆರಳಿ ಮರಳಿ ಬರುವಂತೆ ಒತ್ತಾಯ ಮಾಡಿದ್ದ ಆದ್ರೆ ಪ್ರಯೋಜನವಾಗಿರಲಿಲ್ಲ, ಜೊತೆಗೆ ಪತ್ನಿ ಕಡೆಯವರ ಜೊತೆ ಹೊಡೆದಾಟ ಮಾಡಿಕೊಂಡಿದ್ದ. ಪತ್ನಿಯನ್ನ ಅವರ ಪೋಷಕರು ಕಳುಹಿಸಲು ಒಪ್ಪದಿದ್ದಾಗ ಬಸವರಾಜ್ ಮಾನ್ವಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದ, ಆದ್ರೆ ಪೊಲೀಸರು ಬಸವರಾಜ್ಗೆ ಬುದ್ಧಿ ಹೇಳಿ ನಾಳೆ ಬಾ ಅಂತ ಕಳುಹಿಸಿದ್ದರು. ಇದರಿಂದ ಬೇಸತ್ತು ಮೊದಲೇ ಜೊತೆಗೆ ತಂದಿದ್ದ ಕ್ರಿಮಿನಾಶಕವನ್ನ ಎಲ್ಲರ ಎದುರೇ ಕುಡಿದಿದ್ದಾನೆ. ಕೂಡಲೇ ಬಸವರಾಜ್ನನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.