ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕವಳಿ ತಾಂಡದ ಜನರು ಬೀದಿ ನಾಯಿಗಳ ಹಾವಳಿಗೆ ಭಯಬೀತರಾಗಿದ್ದು, ಮನೆಯ ಬಾಗಿಲುಗಳನ್ನು ಹಾಕಿಕೊಂಡು ಕೂರುವಂತಾಗಿದೆ.
ಇಡೀ ಗ್ರಾಮದಲ್ಲಿ 300ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಮಕ್ಕಳು ಕೈಯಲ್ಲಿ ತಿಂಡಿ ಹಿಡಿದು ಹೊರ ಬರುವಂತೆ ಇಲ್ಲ. ತಿಂಡಿ ನೋಡಿದರೆ ಮಕ್ಕಳ ಮೇಲೆ ಅಟ್ಯಾಕ್ ಮಾಡಿ ಧರ ಧರನೇ ಎಳೆದುಕೊಂಡು ಹೋಗುತ್ತವೆ. ಅಲ್ಲದೆ ಮನೆಯ ಬಾಗಿಲುಗಳು ತೆರೆದರೆ ಸಾಕು ಸೀದಾ ಒಳಗೆ ನುಗ್ಗಿ ಅಡುಗೆ ಪಾತ್ರೆ, ಮತ್ತಿತರ ಸಾಮಗ್ರಿಗಳನ್ನು ಕಚ್ಚಿಕೊಂಡು ಓಡಿ ಹೋಗುತ್ತವೆ.
ಮಕ್ಕಳು ಶಾಲೆಗೆ ಹೋಗೊದಕ್ಕೂ ಭಯಪಡುತ್ತಿದ್ದು, ನಾಯಿಗಳ ಹಾವಳಿಗೆ ಹೆದರಿ ಮನೆಯಲ್ಲಿ ಕೂರುತ್ತಿದ್ದಾರೆ. ಶಾಲೆಗೆ ಹೋಗಬೇಕು ಎಂದರೆ ಪೋಷಕರು ಹೋಗಿ ಬಿಟ್ಟು ಬರಬೇಕಾದ ಪರಿಸ್ಥಿತಿ. ಈ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುವ ಜನರೇ ಹೆಚ್ಚಿದ್ದು, ತಾವು ಕೆಲಸಕ್ಕೆ ಹೋದಾಗ ಬೀದಿ ನಾಯಿಗಳು ಏನಾದರು ಅನಾಹುತ ಮಾಡಿಬಿಟ್ಟರೆ ಕಷ್ಟ ಎಂದು ತಮ್ಮ ಮಕ್ಕಳನ್ನು ಕೂಲಿ ಮಾಡುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸವೂ ಕೂಡ ಅರ್ಧಕ್ಕೆ ನಿಲ್ಲುತ್ತಿದೆ.
ಗ್ರಾಮದ ಮನೆಯ ಮುಂಭಾಗ ಕುರಿಮರಿಗಳನ್ನು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ. ಈಗಾಗಲೇ ರಾಕ್ಷಸ ನಾಯಿಗಳು ಹತ್ತಾರು ಕುರಿಮರಿಗಳನ್ನು ಸಾಯಿಸಿವೆ. ಈ ಸಂಬಂಧ ಗ್ರಾಮಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮನ್ನು ಶ್ವಾನಗಳ ಹಾವಳಿಯಿಂದ ಕಾಪಾಡಿ ಎಂದು ಇಲ್ಲಿನ ಗ್ರಾಮಸ್ಥರು ಗೋಳಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv