ಮೈಸೂರು: ನಮ್ಮ ಇಂದೀರಾ ಕ್ಯಾಂಟೀನ್ ಗೆ ಉಂಗುರ, ಚೈನ್ ಹಾಕಿಕೊಂಡವರೆಲ್ಲ ಹೋಗುತ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ಅವರು, ನಮ್ಮ ಇಂದೀರಾ ಕ್ಯಾಂಟೀನ್ ಗೆ ಉಂಗುರ, ಚೈನ್ ಹಾಕಿಕೊಂಡವರೇಲ್ಲ ಹೋಗುತ್ತಿದ್ದಾರೆ. ಸ್ಕೂಟರ್ನಲ್ಲಿ ಬಂದು ತಿಂಡಿ ತಿಂದು ಹೋಗುತ್ತಾರೆ. ಕ್ಯಾಂಟೀನ್ ನಲ್ಲಿ ಊಟಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ ಅಂದ್ರು.
ಇದಕ್ಕೆ ಕಾರಣ ನಮ್ಮ ಕ್ಯಾಂಟೀನ್ನಲ್ಲಿ ಶುಚಿಯಾದ, ರುಚಿಯಾದ ಊಟ ಸಿಗುತ್ತಿದೆ. ಎಣ್ಣೆ ಕಡಿಮೆ ಇರುವ ಗುಣಮಟ್ಟದ ಊಟ ಕ್ಯಾಂಟೀನ್ ನಲ್ಲಿ ಸಿಗುತ್ತಿದೆ ಎಂದು ಸಿಎಂ ಇಂದಿರಾ ಕ್ಯಾಂಟೀನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಸಿಎಂ, ಬಿಜೆಪಿಯ ಹಿಂಸಾತ್ಮಕ ಹೋರಾಟಕ್ಕೆ ಜನರೇ ಪಾಠ ಕಲಿಸುತ್ತಾರೆ. ಬಿಜೆಪಿಗೆ ಕಾಂಗ್ರೆಸ್ ರಣತಂತ್ರ ಮಾಡಿ ಉತ್ತರ ಕೊಡುವ ಅಗತ್ಯ ಇಲ್ಲ. ಹಿಂದೆ ನಮ್ಮ ಕೆಲವು ತಪ್ಪುಗಳಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕೆಲ ರಾಜ್ಯಗಳಲ್ಲೂ ಇದೇ ತಪ್ಪು ಮರುಕಳಿಸಿತ್ತು. ಆದ್ರೆ ಈಗ ಕಾಂಗ್ರೆಸ್ನಲ್ಲಿ ಆ ತಪ್ಪುಗಳು ಮರುಕಳಿಸುವುದಿಲ್ಲ. ಮುಂದಿನ ಬಾರಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತಿವಿ ಅಂದ್ರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ದಲಿತರಿಗಾಗಿ ಏನು ಮಾಡಿದ್ರು? ಅವತ್ತು ಅವರಿಗೆ ದಲಿತರು ನೆನಪಾಗಲಿಲ್ವಾ. ಇವತ್ತು ಊಟಕ್ಕೆ ಕರೆದು ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ನಾನು ದಿನವೂ ದಲಿತರಿಗೆ ಮನೆಯಲ್ಲಿ ಊಟ ಹಾಕುತ್ತೇನೆ. ಅದನ್ನು ವಿಶೇಷ ಎಂದು ನಾವು ಪರಿಗಣಿಸಿಲ್ಲ. ಯಡಿಯೂರಪ್ಪ ತಮ್ಮ ಮನೆಗೆ ಊಟಕ್ಕೆ ಕರೆದವರು ಮಾತ್ರ ದಲಿತರಾ? ಬೇರೆ ದಲಿತರು ಇಲ್ವಾ ಅಂತ ಪ್ರಶ್ನಿಸಿದ್ರು.
ಶೀಘ್ರದಲ್ಲೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಅಂತ ಸಿಎಂ ಹೇಳಿದ್ರು.