ಬಾಗಲಕೋಟೆ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನ ಮರಕ್ಕೆ ಕಟ್ಟಿಹಾಕಿ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದಲ್ಲಿ ನಡೆದಿದೆ.
36 ವರ್ಷದ ಮಲ್ಲಪ್ಪ ಹೊರಕೇರಿ ಕೊಲೆಯಾದ ವ್ಯಕ್ತಿ. ಗ್ರಾಮದ ಆದಪ್ಪ ಮಿಡಿ ಎಂಬ ವ್ಯಕ್ತಿ ಮಲ್ಲಪ್ಪನನ್ನು ಮರಕ್ಕೆ ಕಟ್ಟಿ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಲ್ಲಪ್ಪ ಮರಕ್ಕೆ ಕಟ್ಟಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ.
ಗ್ರಾಮದ ಮಧ್ಯಭಾಗದಲ್ಲಿ ಮಲ್ಲಪ್ಪರನ್ನು ಕಟ್ಟಿ ಹಾಕಿ ಥಳಿಸುತ್ತಿದ್ದರೂ, ಗ್ರಾಮಸ್ಥರು ಮಾತ್ರ ತಮಗೆ ಏನೂ ಸಂಬಂಧವಿಲ್ಲ ಎಂದು ನೋಡಿದರೂ ನೋಡದಂತೆ ಹೋಗಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಮಲ್ಲಪ್ಪ ಮತ್ತು ಆದಪ್ಪ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಜಗಳದ ಬಳಿಕ ಮೃತ ಮಲಪ್ಪ ಗ್ರಾಮ ತೊರೆದಿದ್ದರು. ಮಂಗಳವಾರ ಗ್ರಾಮಕ್ಕೆ ಬಂದ ಮಲ್ಲಪ್ಪರನ್ನು ಬೇವಿನ ಮರಕ್ಕೆ ಕಟ್ಟಿ ಹಾಕಿ ಥಳಿಸಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಎಸ್ಪಿ ಸಿಬಿ ರಿಷ್ಯಂತ್, ಎಎಸ್ಪಿ ಲಕ್ಷ್ಮಿ ಪ್ರಸಾದ್, ಸಿಪಿಐ ಕೆ.ಎಸ್.ಹಟ್ಟಿ ಮತ್ತು ಪಿಎಸ್ಐ ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಆರೋಪಿಗಳಾದ ಆದಪ್ಪ ಮತ್ತು ರಾಜಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.