ಮೈಸೂರು: ವೋಟ್ ಹಾಕಿ ಗೆಲ್ಲಿಸಿದ್ದೀವಿ. ನಮ್ಮ ಕಷ್ಟ-ಸುಖ ಕೇಳಲು ನೀವು ಬಂದ್ರಾ ಎಂದು ಮತ ಕೇಳಲು ಹೋದ ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರನ್ನು ಎರಡು ಗ್ರಾಮಗಳಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಮತ ಕೇಳಲು ಹೋಗಿದ್ದರು. ಈ ವೇಳೆ ಹುಣಸೂರು ಮೈಸೂರು ರಸ್ತೆಯ ಕೊಳಗಟ್ಟ ಗ್ರಾಮದ ಗ್ರಾಮಸ್ಥರು ಹಾಗೂ ಶ್ರವಣಹಳ್ಳಿ ಗ್ರಾಮದ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.
ಮತ ಕೇಳಲು ಬಂದ ವಿಶ್ವನಾಥ್ ಅವರಿಗೆ ಗ್ರಾಮಸ್ಥರು, ಇದುವರೆಗೂ ನೀವು ನಮ್ಮ ಕಷ್ಟ- ಸುಖ ಕೇಳಲು ಬಂದಿದ್ದೀರಾ? ನಾವು ನಿಮಗೆ ಮತ ಹಾಕಿದ್ದೆವು. ಆದರೆ ನೀವು ರಾಜೀನಾಮೆ ನೀಡಿದ್ದಿರಿ. ನೀವು ಯಾಕೆ ರಾಜೀನಾಮೆ ಕೊಟ್ರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಎಚ್. ವಿಶ್ವನಾಥ್ ಎಷ್ಟೇ ಹೇಳಿದರೂ ಗ್ರಾಮಸ್ಥರು ಅವರ ಮಾತು ಕೇಳದೆ ಜೋರಾಗಿ ಗಲಾಟೆ ಮಾಡುತ್ತಿದ್ದರು. ಬಳಿಕ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹಾಗೂ ಕೆಲ ಗ್ರಾಮಸ್ಥರು ಜನರನ್ನು ಸಮಾಧಾನಪಡಿಸಿದರು.