ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಬಹಿಷ್ಕಾರದ ಕೂಗು ಕೇಳಿಬಂದಿದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಸಾರ್ವಜನಿಕರು ಈ ಬಾರಿ ಮತ ಹಾಕಲ್ಲ ಎಂದು ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ.
ಹೌದು, ಚಿಕ್ಕಮಗಳೂರಿನ ಕಳಸ, ಮೊದಲಮನೆ ಹಾಗೂ ಬಾಳೆಹೊಳೆ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ. ಅಲ್ಲದೆ ಈ ಬಾರಿ ಮತದಾನ ಮಾಡಲ್ಲ ಎಂಬ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಚುನಾವಣಾ ಬಹಿಷ್ಕಾರದ ಫೋಟೋ ಫುಲ್ ವೈರಲ್ ಆಗಿದೆ.
ನಮಗಾಗಿ ಕೆಲಸ ಮಾಡದವರಿಗೆ ನಾವು ಯಾಕೆ ಮತದಾನ ಮಾಡಬೇಕು? ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ಮತದಾರರ ಮೇಲೆ ಪ್ರೀತಿ ಬರುತ್ತೆ. ಬಳಿಕ ಅಧಿಕಾರ ಬಂದಮೇಲೆ ಜನರನ್ನು ಮರೆತು ಬಿಡುತ್ತಾರೆ. ಆದರಿಂದ ಈ ಬಾರಿ ಮತ ಹಾಕಲ್ಲ ಎಂದು ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಈ ಗ್ರಾಮಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ಕೆಲವು ಕಡೆ ಹೊಳೆಗಳು ಇರುವ ಸ್ಥಳಗಳಲ್ಲಿ ಸೇತುವೆಗಳಿಲ್ಲ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಆದರಿಂದ ಚುನಾವಣೆ ನಡೆಯುವ ಒಳಗೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿದರೆ ಮತ ಹಾಕುತ್ತೇವೆ. ಎಲ್ಲವಾದರೆ ಮತ ಹಾಕಲ್ಲ ಎಂದು ಜನಪ್ರತಿನಿಧಿಗಳಿಗೆ ಜನರು ಎಚ್ಚರಿಗೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ 2 ದಿನದಲ್ಲಿ ಮತ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಬಾರಿ ಮತದಾನದಿಂದ ದೂರ ಉಳಿಯಲು ಜನರು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದ ಮುಂಭಾಗದಲ್ಲಿ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಹಿಷ್ಕರಿಸಿದ ಗ್ರಾಮಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಮತದಾರರು ಇದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv