ರಾಮನಗರ: ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿ 30 ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಭಾನುವಾರ ನಡೆದಿದೆ.
ಮಾಗಡಿ ಪಟ್ಟಣದ ಹೊಸಹಳ್ಳಿ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ರು. ಭಾನುವಾರ ಮಧ್ಯಾಹ್ನದ ಬಳಿಕ ಅವರ ಅಂತ್ಯಕ್ರಿಯೆಯನ್ನು ಹೊಸಹಳ್ಳಿ ಗ್ರಾಮದ ಹೊರಭಾಗದಲ್ಲಿ ನಡೆಸಲಾಗುತ್ತಿತ್ತು.
ಅಂತ್ಯಕ್ರಿಯೆ ವೇಳೆ ಗಂಧದಕಡ್ಡಿ ಹಾಗೂ ಹೊಗೆಯಿಂದ ರೊಚ್ಚಿಗೆದ್ದ ಹೆಜ್ಜೇನುಗಳು ಅಲ್ಲಿ ನರೆದ ಜನರ ಮೇಲೆ ದಾಳಿ ನಡೆಸಿವೆ. ಹೆಜ್ಜೇನುಗಳ ದಾಳಿಯಿಂದ ಪಾರಾಗಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹೆಜ್ಜೇನು ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಗ್ರಾಮಸ್ಥರು ಗೋಣಿಚೀಲ ಹಾಗೂ ಟಾರ್ಪಲ್ ಗಳ ಸಹಾಯ ಪಡೆದು ಸಿದ್ದಲಿಂಗಪ್ಪನವರ ಅಂತ್ಯಸಂಸ್ಕಾರ ನಡೆಸಿ ನಿಟ್ಟುಸಿರುಬಿಟ್ಟಿದ್ದಾರೆ.