ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬಳಿಕ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರಕ್ಕಿಳಿದಿದ್ದಾರೆ. ಸಿವಿ ರಾಮನ್ ನಗರದಲ್ಲಿ ದರ್ಶನ್ ಪ್ರಚಾರದ ಅಬ್ಬರ ನಡೆಸಿದ್ದು, ಪ್ರಚಾರ ವೇಳೆ ಅವರಿಗೆ ಶಾಕ್ ಸಿಕ್ಕಿದೆ.
ದರ್ಶನ್ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಜನರು ‘ಗೋ ಬ್ಯಾಕ್ ದರ್ಶನ್’ ಎಂದು ಘೋಷಣೆ ಕೂಗಿದ್ದಾರೆ. ಸಂಸದರು ಇಲ್ಲಿ ಯಾವುದೇ ಕೆಲಸ ಮಾಡಿಲ್ಲ, ಐದು ವರ್ಷಕ್ಕೆ ಒಮ್ಮೆ ಬರುತ್ತಾರೆ. ನಟರಾಗಿ ಒಂದು ಪಕ್ಷದ ಪರ ಕೆಲಸ ಮಾಡೋದು ಸರಿಯಲ್ಲ ಎಂದು ಜನರು ಸಿಟ್ಟು ಹೊರಹಾಕಿದ್ದಾರೆ. ಅಲ್ಲದೆ ಇಲ್ಲಿಂದ ಹೊರಟು ಹೋಗಿ ಎಂದು ಜನರು ದರ್ಶನ್ ಹಾಗೂ ಪಿಸಿ ಮೋಹನ್ ಅವರ ಫ್ಲೆಕ್ಸ್ ಹಿಡಿದು ಪ್ರತಿಭಟನೆ ಮಾಡಿದರು.
ಇನ್ನು ಪಿಸಿ ಮೋಹನ್ ಅವರ ಪರವಾಗಿ ಏಕೆ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಉತ್ತರಿಸಿದರು. ದರ್ಶನ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಾನು ಮೊದಲನೇ ಬಾರಿಗೆ ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿಲ್ಲ. ಪಿಸಿ ಮೋಹನ್ ನನಗೆ 15 ವರ್ಷದಿಂದ ಸ್ನೇಹಿತರು. ನಾನು ಈ ಹಿಂದೆ ಕೂಡ ಪ್ರಚಾರ ಮಾಡಿದ್ದೆ. ಈಗ ಕೂಡ ಪ್ರಚಾರ ಮಾಡುತ್ತಿದ್ದೇನೆ. ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದರು.
ನಾನು ಎಂಪಿ, ಎಂಎಲ್ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ. ಏಕೆಂದರೆ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್ಗೆ ಹಣ ನೀಡಿ ಎಂದು ಜನರು ಕೇಳಿಕೊಂಡು ಬರುತ್ತಾರೆ. ಆಗ ಎಂಪಿ, ಎಂಎಲ್ಎ ಅವರಿಂದ ಪತ್ರ ಬಯಸುತ್ತೇನೆ. ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಆಪರೇಶನ್ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಎಂದರು.