ಕೊಪ್ಪಳ: ಜನ ವಾಸಿಸುವ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ಕಂಪನಿಯ ಅನಧಿಕೃತ ಮೊಬೈಲ್ ಟವರ್ವೊಂದು ಜಿಲ್ಲೆಯಲ್ಲಿ ರಾತ್ರೋ ರಾತ್ರಿ ನಿರ್ಮಾಣವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಗಾವತಿಯ ಶರಣಬಸವೇಶ್ವರ ಕ್ಯಾಂಪ್ನ ಆಶ್ರಯ ಕಾಲೋನಿಯಲ್ಲಿ ಮೊಬೈಲ್ ಟವರ್ ನಿರ್ಮಾಣವಾಗಿದೆ. ಇನ್ನೂ ಇದನ್ನು ನಿರ್ಮಿಸಲು ಜಿಲ್ಲಾಡಳಿತ, ಹಾಗೂ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಅನಧಿಕೃತವಾಗಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ವಾಸಿಸುವ ಜನರು ಎಲ್ಲಾ ಕೂಲಿ ಕಾರ್ಮಿಕರು. ಈ ಮಧ್ಯೆ ಇಂತಹ ಟವರ್ ಗಳಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಆದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನ ವಾಸಿಸುವ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತೆ. ಆದರೆ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ಕಂಪನಿಯ ಅನಧಿಕೃತ ಮೊಬೈಲ್ ಟವರ್ವೊಂದು ರಾತ್ರೋ ರಾತ್ರಿ ತಲೆ ಎತ್ತಿ ನಿಂತಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಜಿಲ್ಲಾಡಳಿತ ಮತ್ತು ತಾಲೂಕಿನ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ತಕ್ಷಣವೇ ಟವರ್ ನಿರ್ಮಾಣವನ್ನು ಸ್ಥಗಿತಗೊಳಿಸಿ, ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.