– ಏಕಭಾರತ, ಶ್ರೇಷ್ಠ ಭಾರತವೇ ನಮ್ಮ ಗುರಿ
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (PoK) ನಮ್ಮದು. ಅಲ್ಲಿನ ನಮ್ಮ ಸಹೋದರರು ಅವರಾಗಿಯೇ ಬಂದು ಭಾರತಕ್ಕೆ ಸೇರಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟದ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಪಾಕಿಸ್ತಾನದೊಂದಿಗಿನ (Pakistan) ಭವಿಷ್ಯದ ಮಾತುಕತೆಗಳು ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಮಾತ್ರ ಆಗಿರುತ್ತದೆ. ಇನ್ನೂ ಪಿಓಕೆ ಜನರು ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟಿದ್ದರೂ, ಅವರು ಭಾರತದ ಭಾಗವಾಗಿದ್ದಾರೆ. ಅವರು ಒಂದು ದಿನ ಸ್ವಯಂಪ್ರೇರಣೆಯಿಂದ ಭಾರತದ ಮುಖ್ಯವಾಹಿನಿಗೆ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ಏಕ ಭಾರತ್ ಶ್ರೇಷ್ಠ ಭಾರತ್ ಎಂಬ ಸಂಕಲ್ಪಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಜೆಕೆಯಲ್ಲಿನ ಬಹುತೇಕ ಜನ ಭಾರತದೊಂದಿಗೆ ಸೇರಲು ಬಯಸಿದ್ದಾರೆ. ಬೆರಳೆಣಿಕೆಯಷ್ಟು ಜನರು ಮಾತ್ರ ದಾರಿ ತಪ್ಪಿದ್ದಾರೆ. ಭಾರತ ಯಾವಾಗಲೂ ಪ್ರೀತಿ, ಏಕತೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುತ್ತದೆ ಎಂದಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ವಿಚಾರವಾಗಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಉತ್ಪಾದಕ ಮತ್ತು ರಫ್ತುದಾರನಾಗಿ ಹೊರಹೊಮ್ಮಿದೆ. ನಮಗೆ ಈ ಸಾಮರ್ಥ್ಯ ಇಲ್ಲದೇ ಇದ್ದಿದ್ದರೆ, ಪಾಕ್ನಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಪಡೆಗಳು ಹತ್ತಿಕ್ಕಲು ಆಗುತ್ತಿರಲಿಲ್ಲ. ನಮ್ಮ ದೇಶ ಫೈಟರ್ ಜೆಟ್ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ತಯಾರಿಸುವುದಲ್ಲದೆ, ನವ ಯುಗದ ಯುದ್ಧ ತಂತ್ರಜ್ಞಾನಕ್ಕೂ ತಯಾರಿ ನಡೆಸುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಜಾಗತಿಕ ಅಸ್ಥಿರತೆ ಮತ್ತು ಆರ್ಥಿಕ ನಿಧಾನಗತಿಯ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಮತ್ತು ಮೋದಿಯವರ ನಾಯಕತ್ವದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅವರು ಇದೇ ವೇಳೆ ನುಡಿದಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಆಗಿ 100 ದಿನ ಪೂರೈಸಿದ ರೇಖಾ ಗುಪ್ತಾ – ಇನ್ನೂ ಸಿಗದ ಅಧಿಕೃತ ನಿವಾಸ!