ಹುಬ್ಬಳ್ಳಿ: ರಾಜ್ಯದಲ್ಲಿರುವ ಕಲಬೆರಕೆ ಸರ್ಕಾರದಿಂದ ರಾಜ್ಯದ ಜನ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವ ಬಜೆಟ್ ಮತ್ತು ಬಜೆಟ್ ಅಧಿವೇಶನ ರಾಜ್ಯದ ಜನರ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸರ್ಕಾರ ರಚನೆಯಾಗಿ ಒಂದುವರೆ ತಿಂಗಳಾಗಿದ್ದು, ಬಜೆಟ್ ಮಂಡಿಸಬೇಕಾ, ಇಲ್ಲಾ ಮಂಡಿಸಬಾರದು ಎಂಬ ಸ್ಥಿತಿಯಲ್ಲಿದ್ದಾರೆ. ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ವ್ಯವಸ್ಥೆ ನೆಲಕಚ್ಚಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಹುಟ್ಟುತ್ತಿವೆ. ಯಾವ ಜಿಲ್ಲೆಯನ್ನು ಯಾರಿಗೆ ಕೊಡಬೇಕು ಎಂಬುದಕ್ಕೆ ಜಗಳ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಜೆಟ್ ಅಧಿವೇಶನ ಅರ್ಥಹೀನ ಕಸರತ್ತು. ಅಕ್ಷರಶಃ ಸಿದ್ದರಾಮಯ್ಯನವರು ಈ ಬಜೆಟ್ ಗೆ ನಮ್ಮ ಬೆಂಬಲ ಇಲ್ಲ ಎಂದಿದ್ದಾರೆ. ಈ ಬಜೆಟ್ ಕೇವಲ 37 ಜನ ಶಾಸಕರ ಬಜೆಟ್ ಎಂದು ಹೇಳಿದ್ದ ಸಿದ್ದರಾಮಯ್ಯನವರು ನಾನು ಬಜೆಟ್ ಮಾಡಲು ವಿರೋಧ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಆ ವೀಡಿಯೋ ತುಣುಕುಗಳನ್ನು ಯಾರೋ ಕಿಡಿಗೇಡಿಗಳು ಬಿಡುಗಡೆ ಮಾಡಿದ್ದಾರೆಂದು ಹೇಳಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರು ಪ್ರತಿದಿನವೂ ಕಿಡಿಗೇಡಿಗಳನ್ನು ಭೇಟಿ ಮಾಡುತ್ತಿದ್ದರಾ? ಅಂದರೆ ಇವರನ್ನ ಭೇಟಿಯಾದ ಶಾಸಕರೆಲ್ಲರೂ ಕಿಡಿಗೇಡಿಗಳು ಎಂದರ್ಥವೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.
ಸದ್ಯ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಒತ್ತಡದ ನಂತರ ಈ ರೀತಿ ಉಲ್ಟಾ ಹೊಡೆದಿದ್ದಾರೆ. ಈ ಸಮ್ಮಿಶ್ರ ಸರ್ಕಾರ ಆದಷ್ಟು ಬೇಗ ಹೋಗಬೇಕು. ಈ ಸರ್ಕಾರದಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಈ ಬಜೆಟ್ ನಲ್ಲಿ ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡಬೇಕು. ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಂತ ಮಾತನ್ನು ಉಳಿಸಿಕೊಳ್ಳಬೇಕು. ಒಂದು ವೇಳೆ ಮಾಡದೆ ಇದ್ದರೆ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಮಾಡಲು ಸಿದ್ಧವಾಗಿದೆ ಎಂದರು.
ಲೋಕಸಭಾ ಚುನಾವಣೆ ಅವಧಿಯಂತೆ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತದೆ. ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯ ಸಿದ್ಧವಾಗಿದೆ, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುತ್ತದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.