ಹಾಸನ: ನಮಗೆ ಜಿಲ್ಲೆಯ ಜನ ಹಲವು ದಶಕಗಳಿಂದ ಆಶೀರ್ವಾದ ಮಾಡಿದ್ದಾರೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಎಲ್ಲರೂ ನನಗೆ ಸಹಕಾರ ಕೊಟ್ಟಿದ್ದಾರೆ. ಈ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ವಿಶ್ವಾಸ ವ್ಯಕ್ತಪಡಿಸಿದರು.
20 ದಿನಗಳ ನಂತರ ಮಂಗಳವಾರ ರಾತ್ರಿ ಸ್ವಕ್ಷೇತ್ರಕ್ಕೆ ಆಗಮಿಸಿ ಇಂದು ಹೊಳೆನರಸೀಪುರ (Holenarasipura) ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು. ನಮಗೆ ದಶಕಗಳಿಂದ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದು, ನನ್ನ ವಿರುದ್ಧದ ಕೇಸ್ಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಏನೂ ಮಾತನಾಡಲ್ಲ. ನ್ಯಾಯಾಲಯಕ್ಕೆ ಗೌರವ ಕೊಡುತ್ತೇನೆ. ಮುಂದೆ ಮಾತನಾಡುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಆದ್ದರಿಂದ ನಾನು ಏನು ಮಾತನಾಡಲ್ಲ ಎಂದರು. ಇದನ್ನೂ ಓದಿ: ವಿಚಾರಣೆಗೆ ಬನ್ನಿ – ಹರೀಶ್ ಪೂಂಜಾ ಬಂಧನ ಮಾಡದೇ ತೆರಳಿದ ಪೊಲೀಸರು
ನಾನು ಬದುಕಿರುವವರೆಗೂ ನನ್ನನ್ನ ಜನ ಕೈ ಬಿಡೋದಿಲ್ಲ ಅನ್ನೋ ವಿಶ್ವಾಸ ಇದೆ. ನಾನು, ಕುಮಾರಸ್ವಾಮಿ ದೇವೇಗೌಡರು ಎಲ್ಲರೂ ಅವರ ಜೊತೆ ಇರುತ್ತೇವೆ. ಜಿಲ್ಲೆಯ ಜನ ದೇವೇಗೌಡರಿಗೆ 60 ವರ್ಷ ರಾಜಕೀಯವಾಗಿ ಬೆಂಬಲ ನೀಡಿದ್ದಾರೆ. ಈ ಜಿಲ್ಲೆಯ ಜನರ ಋಣ ನನ್ನ ಮೇಲಿದೆ. ಇದನ್ನು ಬಿಟ್ಟು ನಾನು ಏನನ್ನೂ ಹೇಳೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ: 2010 ರಿಂದ ಬಂಗಾಳದಲ್ಲಿ ನೀಡಲಾದ ಎಲ್ಲಾ OBC ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಹೈಕೋರ್ಟ್
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ನಿನ್ನೆ ಮೈಸೂರಿನಲ್ಲಿ ಸಭೆ ಆಗಿದೆ. ಶೈಕ್ಷಣಿಕ ಶಿಕ್ಷಕರ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಅಪಾರ ಇದೆ. ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿವೇಕಾನಂದರಿಗೆ ನಮ್ಮ ಪಕ್ಷ ಟಿಕೆಟ್ ನೀಡಿದೆ. ಅವರ ಗೆಲುವಿಗಾಗಿ ಹೋರಾಡುತ್ತೇವೆ. ಶ್ರೀಕಂಠೇಗೌಡ ಅವರ ಅಸಮಾಧಾನದ ಬಗ್ಗೆ ಮಾತನಾಡಲ್ಲ ಎಂದ ರೇವಣ್ಣ, ಪ್ರಜ್ವಲ್ ಯಾವಾಗ ಬರುತ್ತಾರೆ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿ ಹೊರಟರು. ಇದನ್ನೂ ಓದಿ: ಹರೀಶ್ ಪೂಂಜಾ ಬಂಧನಕ್ಕೆ ಮುಂದಾದ ಪೊಲೀಸರು – ಬೆಳ್ತಂಗಡಿಯಲ್ಲಿ ಹೈಡ್ರಾಮಾ