ನವದೆಹಲಿ: ರಸ್ತೆ ಅಪಘಾತಗಳಲ್ಲಿ (Road Accidents) ಸಾವುಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ ಜನರಿಗೆ ಕಾನೂನಿನ ಬಗ್ಗೆ ಗೌರವ ಹಾಗೂ ಭಯವಿಲ್ಲದ ಕಾರಣ ಸಾವುನೋವುಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Gadkari) ಆತಂಕ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ನಾಲ್ಕು ಅಂಶಗಳ ಬಗ್ಗೆ ಚರ್ಚಿಸಿದ್ದಾರೆ. ಅವುಗಳೆಂದರೆ ರಸ್ತೆ ಎಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಾನೂನು ಜಾರಿ ಮತ್ತು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ನೀಡುವುದು ಎಂದು ಅವರು ಒತ್ತಿ ಹೇಳಿದ್ದಾರೆ.
ನಮ್ಮ ಸಮಾಜದ ದೊಡ್ಡ ಸಮಸ್ಯೆ ಎಂದರೆ ಜನರಿಗೆ ಕಾನೂನಿನ ಬಗ್ಗೆ ಗೌರವವ ಹಾಗೂ ಭಯವಿಲ್ಲದಿರುವುದು. ರೆಡ್ ಸಿಗ್ನಲ್ನಲ್ಲಿ ನಿಲ್ಲುವುದಿಲ್ಲ. ಅಲ್ಲದೇ ನಮ್ಮ ಜನ ಹೆಲ್ಮೆಟ್ ಹಾಕುವುದಿಲ್ಲ. ಹೆಲ್ಮೆಟ್ ಹಾಕದ ಕಾರಣಕ್ಕೆ 30,000 ಜನ ಸಾಯುತ್ತಾರೆ. ಇನ್ನೂ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನೇ ಅಪಘಾತಕ್ಕೆ ಗುರಿಯಾಗಿದ್ದೆ. ಅಪಘಾತದಲ್ಲಿ ನನ್ನ ಕಾಲು ಮುರಿದಿತ್ತು ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಅಪಘಾತ ತಡೆಗೆ ಕಠಿಣ ಪ್ರಯತ್ನದ ಹೊರತಾಗಿಯೂ ರಸ್ತೆ ಅಪಘಾತದಲ್ಲಿ ಈ ವರ್ಷ 1.68 ಲಕ್ಷ ಸಾವುಗಳು ಸಂಭವಿಸಿವೆ. ರಸ್ತೆಗಳ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದ ಕಾರಣ ಈ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮಗಳು ಅಥವಾ ಸಮಾಜದ ಸಹಕಾರವಿಲ್ಲದೆ ಇದರ ನಿಯಂತ್ರಣ ಸಾಧ್ಯವಿಲ್ಲ. ನಾವೂ ದಂಡವನ್ನು ಹೆಚ್ಚಿಸಿದ್ದೇವೆ, ಆದರೆ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆತಂಕ ಹೊರ ಹಾಕಿದ್ದಾರೆ.