ಬೆಂಗಳೂರು: ಮಳೆಯಿಂದ ಹಾನಿಯಾದ ಬೆಂಗಳೂರು ರಸ್ತೆಗುಂಡಿ (Pothole) ಯನ್ನ ಮುಚ್ರಪ್ಪ ಅಂದ್ರೇ ಕಟ್ಟಡದ ಅವಶೇಷದ ಡೆಬ್ರಿಸ್ ಹಾಕಿ ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ನಕಲಿ ಬಿಲ್ಲಿಗೆ ಬಿಬಿಎಂಪಿ (BBMP) ಹೈಡ್ರಾಮಾ ಮಾಡಿದ ಪ್ರಸಂಗವೊಂದು ಬಯಲಾಗಿದೆ.
ಜನರ ಈ ಆಕ್ರೋಶ, ಅಸಮಾಧಾನವನ್ನ ಕೇಳಿಸಿಕೊಳ್ಳಲು ಸರ್ಕಾರಕ್ಕೆ ಕಿವಿಯಿಲ್ಲ. ಜನರ ಬಗ್ಗೆ ಕಾಳಜಿಯೂ ತೋರಿಸ್ತಿಲ್ಲ. ಯೆಸ್ ಬೆಂಗಳೂರು (Bengaluru) ಇದೀಗ ಗುಂಡಿಗಳ ಊರಾಗ್ತಿದೆ. ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳ ನರಕ ದರ್ಶನವಾಗ್ತಿದ್ದು, ಪಾಲಿಕೆ ಮಾತ್ರ ಗುಂಡಿಗಳನ್ನ ಮುಚ್ಚದೇ ಅಮಾಯಕ ಜನರ ಜೀವವನ್ನ ಕೊಲ್ಲುತ್ತಿದೆ. ಮೊನ್ನೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಅದನ್ನ ಮುಚ್ಚಲು ಡೆಬ್ರಿಸ್ ತಂದು ಸುರಿಯುತ್ತಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!
ನಗರದಲ್ಲಿ ಸುರಿದ ಭಾರೀ ಮಳೆ (Rain) ಗೆ ರಸ್ತೆ ಗುಂಡಿಗಳು ಬಲಿಗಾಗಿ ಮತ್ತೆ ಬಾಯ್ತೆರೆದಿವೆ. ಗುಂಡಿ ಮುಚ್ಚಿ ಜೀವಗಳನ್ನ ಉಳಿಸಬೇಕಾದ ಪಾಲಿಕೆ, ಮತ್ತೆ ಅದೇ ಬೇಜವಾಬ್ದಾರಿತನ ತೋರಿಸ್ತಿದೆ. ಸಿಟಿ ಮಾರ್ಕೆಟ್, ಸಿರ್ಸಿ ಸರ್ಕಲ್, ಮೈಸೂರ್ ರೋಡ್ನಲ್ಲಿ ಕಟ್ಟಡದ ತ್ಯಾಜ್ಯವನ್ನ ಸುರಿದು ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ಟ್ರ್ಯಾಕ್ಟರ್ (Tractor) ಮೂಲಕ ತ್ಯಾಜ್ಯವನ್ನ ತಂದು ಅವೈಜ್ಞಾನಿಕವಾಗಿ ಗುಂಡಿ ಮುಚ್ಚುತ್ತಿದ್ದಾರೆ. ಪಾಲಿಕೆಯ ಬುದ್ಧಿವಂತ ಅಧಿಕಾರಿಗಳು, ಗುಂಡಿಗಳಿಗೆ ಆಳೆತ್ತರ ಅವಶೇಷ ಸುರಿದು ಟ್ರಾಫಿಕ್ ಜಾಮ್ (Traffic Jam) ಮಾಡ್ತಿದ್ದಲ್ಲದೆ, ಕಳ್ಳ ಕೆಲಸ ಮಾಡಿ, ನಕಲಿ ಬಿಲ್ ಸೃಷ್ಟಿಸಿ ಸಖತ್ ಡ್ರಾಮಾ ನಡೆಸ್ತಿದ್ದಾರೆ.
ಕೆಡವಿದ ಕಟ್ಟಡದ ಅವಶೇಷಗಳನ್ನ ತಂದು, ನಯಾ ಪೈಸೆ ಖರ್ಚಿಲ್ಲದೇ ಗುಂಡಿಗಳನ್ನ ಮುಚ್ಚಿದ್ದಾರೆ. 1 ಕಿಲೋ ಮೀಟರ್ ವ್ಯಾಪ್ತಿಯಲ್ಲೇ 7 ಕಡೆ ಕಟ್ಟಡ ಅವಶೇಷಗಳನ್ನ ಬಿಬಿಎಂಪಿ ಅಧಿಕಾರಿಗಳು ಸುರಿದಿದ್ದಾರೆ. ಮಳೆ ಬಂದ್ರೆ ಮತ್ತೆ ಕಿತ್ತು ಬರುವ ಕಟ್ಟಡದ ಅವಶೇಷಗಳ ಸುರಿದಿರುವ ಬಿಬಿಎಂಪಿ ಬುದ್ಧಿವಂತಿಕೆಗೆ ಸ್ಥಳೀಯರು ಕಿಡಿ ಕಾರುತ್ತಿದ್ದಾರೆ.