ರಾಮನಗರ: ಬೊಂಬೆನಗರಿ ಅಂತಲೇ ಖ್ಯಾತಿ ಗಳಿಸಿರೋ ಚನ್ನಪಟ್ಟಣದ ಕೆರೆಗಳೆಲ್ಲಾ ತುಂಬಿ ಥಳಥಳಿಸ್ತಾ ಇವೆ. ಒಂದೆಡೆ ಕೆರೆಗಳೆಲ್ಲಾ ತುಂಬಿ ಅಂತರ್ಜಲ ಮತ್ತೆ ಮೇಲಕ್ಕೇರಿದ ಸಂತಸ ಜನರಲ್ಲಿದೆ. ಆದ್ರೆ ಇನ್ನೊಂದೆಡೆ ಅದೇ ಕೆರೆಗಳ ಬಳಿ ಜೀವವನ್ನ ಅಂಗೈಲಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ಕಳೆದ ಒಂದು ತಿಂಗಳ ಕಾಲ ಸುರಿದ ಮಳೆಯಿಂದಾಗಿ ಚನ್ನಪಟ್ಟಣ ತಾಲೂಕಿನ ಕೆರೆಗಳೆಲ್ಲಾ ತುಂಬಿ ತುಳುಕುತ್ತಿದ್ದು, ಎಲ್ಲಿ ಕೆರೆಗೆ ಬೀಳ್ತಿವೋ ಅಂತ ಆತಂಕದಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಬಹುತೇಕ ಕೆರೆಗಳು ಪ್ರಾಣಬಲಿಗಾಗಿ ಕಾದು ಕುಳಿತಿದ್ದು, ಅತೀ ದೊಡ್ಡ ಕೆರೆ ತಿಟ್ಟಮಾರನಹಳ್ಳಿಯಲ್ಲಿನ ರಸ್ತೆ ಕೂಡ ಹದಗೆಟ್ಟಿದೆ. ಕೆರೆಯ ಬಳಿ ತಿರುವುಗಳಿದ್ರೂ ಎಚ್ಚರಿಕೆ ನಾಮಫಲಕಗಳಿಲ್ಲ, ತಡೆಗೋಡೆಗಳಿಲ್ಲ. ಇಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ.
ಇದ್ರಿಂದ ರೊಚ್ಚಿಗೆದ್ದಿರೋ ಗ್ರಾಮಸ್ಥರು ರಸ್ತೆ ದುರಸ್ಥಿಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಅಪಘಾತಗಳು ಸಂಭವಿಸದಂತೆ ಕುರಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದ್ರೂ ಕೂಡಾ ಯಾವೊಬ್ಬ ಅಧಿಕಾರಿಗಳೂ ಇತ್ತ ಸುಳಿದಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ರಾಮನಗರ ಜನರಿಗೆ ಕೆರೆಗಳು ತುಂಬಿತಲ್ಲಾ ಅನ್ನೋ ಖುಷಿ ನಡುವೆ ಹೊಸ ಸಂಕಟ ಬೇರೆ ಶುರುವಾಗಿದೆ. ಹೀಗಾಗಿ ಜೀವಬಲಿಗೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡ್ರೆ ಒಳ್ಳೆಯದು ಅಂತ ಸ್ಥಳೀಯರು ಹೇಳುತ್ತಿದ್ದಾರೆ.