ಬೆಂಗಳೂರು: ನಗರದಲ್ಲಿ ಸೈಕಲ್ ಕದಿಯಲು ಬಂದ ಕಳ್ಳನಿಗೆ ಸಾರ್ವಜನಿಕರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಇವತ್ತಿನ ರೇಟ್ ನಲ್ಲಿ ಇಂತಹ ಒಂದ್ ಸೈಕಲ್ ಬೆಲೆ ಏನಿಲ್ಲವೆಂದರು ಹದಿನೈದರಿಂದ ಇಪ್ಪತ್ತು ಸಾವಿರ ರೂ. ಇರುತ್ತದೆ. ತಿಂಗಳಿಗೆ ಮೂರು ಸೈಕಲ್ ಕದ್ದರೆ ಜೀವನ ನಡೆದೋಗುತ್ತೆ ಎನ್ನುವ ಕಳ್ಳರಿದ್ದಾರೆ. ಹೀಗೆ ಸೈಕಲ್ ಕದ್ದು ಹೊಟ್ಟೆ ಹೊರೀತಿದ್ದ ಕಳ್ಳನಿಗೆ ಸಖತ್ ಗೂಸಾ ಬಿದ್ದಿವೆ.
ಕಳೆದ ಭಾನುವಾರ ಬಾಡೂಟ ತಿಂದು ಮನೆ ಮಂದಿಯೆಲ್ಲ ಟಿವಿ ನೋಡ್ಕೊಂಡು ಕೂತಿದ್ದರು. ಸಂಜೆ 6 ಗಂಟೆ ವೇಳೆಗೆ ಬೆಂಗಳೂರಿನ ಸುಬ್ರಮಣ್ಯನಗರಕ್ಕೆ ಎಂಟ್ರಿ ಕೊಟ್ಟ ಕಳ್ಳ ಯಾರ್ಯಾರ ಕಾಂಪೌಂಡ್ನಲ್ಲಿ ಸೈಕಲ್ಗಳಿವೆ ಎಂದು ಕಣ್ಣಾಡಿಸಿದ್ದ. ಆ ಕಡೆ ಈ ಕಡೆ ಓಡಾಡಿದವನೇ ವೆಂಕಟೇಶ್ ಎನ್ನುವರ ಮನೆಯ ಕಾಂಪೌಡ್ ಒಳಗೆ ನುಗ್ಗಿ ಡೊಡ್ಡ ಕಟರ್ ನಿಂದ ಲಾಕ್ ಮುರಿದು ಸೈಕಲ್ ಕದಿಯೋಕೆ ಪ್ರಯತ್ನಿಸಿದ್ದಾನೆ.
ಇವನ ಕೃತ್ಯ ಗಮನಿಸಿದ ಮಾಲೀಕರು ಕೆಳಗೆ ಓಡಿ ಬಂದಿದ್ದಾರೆ. ಆಗ ಕಳ್ಳ ಅಯ್ಯೋ ಕೆಟ್ನಲ್ಲಾ ಎಂದು ಓಡೋಕೆ ಶುರು ಮಾಡಿದ್ದಾನೆ. ಯಾವಾಗ ಕಳ್ಳ ಕಳ್ಳ ಹಿಡಿಯಿರಿ ಹಿಡಿಯಿರಿ ಎಂದು ಕೂಗಿಕೊಂಡರೋ ಕಾರ್ವೊಂದರ ಕೆಳಗೆ ಅವಿತು ಕುಳಿತುಕೊಂಡಿದ್ದಾನೆ. ಏರಿಯಾ ಜನರೆಲ್ಲಾ ಹುಡುಕಾಡುತ್ತಿದ್ದಾಗ ಕಾರ್ ಕೆಳಗೆ ಬಚ್ಚಿಟ್ಟುಕೊಂಡಿರೋದನ್ನ ಗಮನಿಸಿ ಹೊರಗೆ ಎಳೆದು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಏನು ನಿನ್ನ ಹೆಸರು ಎಂದರೆ ಮಲ್ಲೇಶ, ಕಲ್ಲೇಶ ಎಂದು ಎರಡು ಮೂರು ಹೆಸರು ಹೇಳಿದ್ದಾನೆ. ಕೊನೆಗೆ ಪೊಲೀಸರನ್ನು ಕರೆಸಿ ಕಳ್ಳನನ್ನ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ.