ಬೆಂಗಳೂರು: ಮೈಸೂರಿನಲ್ಲಿ ಭೂಮಿಯೇ ಕೊತ-ಕೊತ ಕುದಿದು ಬಾಲಕನನ್ನ ಬಲಿ ಪಡೆದಿದ್ದಾಯ್ತು. ಇದೀಗ ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ, ಚನ್ನಪಟ್ಟಣ, ಮದ್ದೂರಲ್ಲಿ ಲಘು ಭೂಕಂಪನ ಅನುಭವವಾಗಿದ್ದು, ಕೆಲಕಾಲ ಜನರನ್ನು ಆತಂಕಕ್ಕೀಡುಮಾಡಿದೆ.
ಬೆಂಗಳೂರಿನ ಯಲಹಂಕ ನ್ಯೂಟೌನ್, ಹನುಮಂತರನಗರ, ಶ್ರೀನಗರಗಳಲ್ಲಿ ಭೂಮಿ ಕಂಪಿಸಿದ್ದು, ಹಿರಿಯ ನಟಿ ಲೀಲಾವತಿ ನಟ ವಿನೋದ್ ರಾಜ್ಗೂ ಈ ಅನುಭವವಾಗಿದೆಯಂತೆ. ಸುಮಾರು 2-3 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಇದರಿಂದ ಭಯಗೊಂಡ ನಿವಾಸಿಗಳು ಮನೆಯಿಂದ ಹೊರ ಬಂದಿದ್ದಾರೆ.
ನೆಲಮಂಗಲದಲ್ಲಿರುವ ಫಾರ್ಮ್ ಹೌಸ್, ಸೋಲದೇವನಹಳ್ಳಿ ಸುತ್ತಲೂ ಭೂಮಿ ಅಲುಗಾಡಿದ ಅನುಭವವಾಗಿದ್ದು, ಜನ ಆತಂಕದಿಂದ ಹೊರಬಂದಿದ್ದಾರೆ. ಇಲ್ಲಿ 5-6 ಸೆಕೆಂಡ್ ಗಳ ಕಾಲ ಭೂಮಿ ನಡುಗಿದೆ ಅಂತಾ ಸ್ಥಳೀಯರು ತಿಳಿಸಿದ್ದಾರೆ.
ಮಂಡ್ಯದ ಮಳವಳ್ಳಿ ತಾಲೂಕಿನ ಬೆಳಕವಾಡಿ, ನೆಟ್ಕಲ್, ಕಿರಗಸೂರು ಗ್ರಾಮ ಸುತ್ತ ಭೂಮಿ ಕಂಪಿಸಿದ್ದು, ಗೋಡೆಗಳಲ್ಲಿ ಬಿರುಕು, ಮನೆಯಲ್ಲಿದ್ದ ಗಾಜಿನ ಗ್ಲಾಸ್ಗಳು ಚೆಲ್ಲಾಪಿಲ್ಲಿಯಾಗಿವೆ. ಇನ್ನು ರಾಮನಗರ- ಚನ್ನಪಟ್ಟಣದಲ್ಲಿಯೂ ಭೂಕಂಪನವಾಗಿದೆ. ಚಾಮರಾಜನಗರದ ಕೊಳ್ಳೇಗಾಲ, ತುಮಕೂರು ನಗರದ ಹಲವಡೆ ಬೆಳಗ್ಗೆ 7.38 ರಿಂದ 7.45 ಸುಮಾರಿಗೆ ಲಘು ಭೂಕಂಪನವಾಗಿದೆ.