ಬೆಂಗಳೂರು: ಟ್ರಾಫಿಕ್ ಪೊಲೀಸರ ಟೋಯಿಂಗ್ ಟಾರ್ಚರ್ಗೆ ಜನ ಹೈರಾಣಾಗಿ ಹೋಗಿದ್ದಾರೆ. ಇದು ನಿನ್ನೆ ಮೊನ್ನೆಯದಲ್ಲ. ನಿತ್ಯ ವಾಹನವನ್ನು ಪಾರ್ಕ್ ಮಾಡಿದರೆ ವಾಪಸ್ ಬರುವಷ್ಟರಲ್ಲಿ ಎತ್ತಾಕ್ಕೊಂಡು ಹೋಗಿರ್ತಾರೆ. ಈ ಟೋಯಿಂಗ್ ಗೊಂದಲಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ತಾತ್ಕಾಲಿಕ ಮದ್ದು ಕೊಟ್ಟಿದ್ದಾರೆ.
ಟೋಯಿಂಗ್ ಗೊಂದಲದ ಬಗ್ಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಶಕ್ತಿ ಭವನದಲ್ಲಿ ಬೊಮ್ಮಾಯಿ ಸಭೆ ನಡೆಸಿದರು. ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇಂದು ನಡೆಯಿತು. ಹೊಸ ಮಾರ್ಗಸೂಚಿ (ಎಸ್ಒಪಿ) ಸಿದ್ದಪಡಿಸೊ ತನಕ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಟೋಯಿಂಗ್ ಕಿರಿಕಿರಿ ಇಲ್ಲ ಎಂದು ಸಂಜೆ ನಡೆದ ಸಿಎಂ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್
ಸಭೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗಿಯಾಗಿದ್ದರು. ಸಿಎಂ ಜೊತೆ ನಡೆದ ಸುದೀರ್ಘ ಸಭೆಯಲ್ಲಿ ಟೋಯಿಂಗ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಈಗ ಇರುವಂತೆ ಟೋಯಿಂಗ್ ನಿಯಮಗಳನ್ನ ಬದಲಾವಣೆ ಮಾಡಲು ಸೂಚನೆ ಕೊಟ್ಟಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಟೋಯಿಂಗ್ ವಾಹನಗಳ ಕಾರ್ಯ ವೈಖರಿ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ಮಾಡಿ. ಎಸ್ಒಪಿ ಏನು ಇದೆ ಅವುಗಳಲ್ಲಿ ಕೆಲವು ಬದಲಾವಣೆಗಳಿಗೆ ಸೂಚನೆ ನೀಡಿದ್ದಾರೆ. ಪಾರದರ್ಶಕತೆಯ ದೃಷ್ಟಿಯಿಂದ ಪಾರದರ್ಶಕವಾಗಿರಬೇಕು. ಅಲ್ಲಿಯ ತನಕ ಟೋಯಿಂಗ್ ವಾಹನವನ್ನ ನಿಯಂತ್ರಿಸಿ ಕಾರ್ಯಚರಣೆ ಮಾಡುವುದಕ್ಕೆ ನಾವು ಸೂಚನೆ ಕೊಡುತ್ತಿದ್ದೇವೆ. ಒಟ್ಟಾರೆ ಕೆಲವು ಬದಲಾವಣೆಗಳು ಪಾರದರ್ಶಕತೆ ದೃಷ್ಟಿಯಿಂದ ಮಾಡಲು ಹೇಳಿದ್ದಾರೆ. ಅದನ್ನ ಪರಿಶೀಲನೆ ಮಾಡಿ ಇಲಾಖೆ ಹೊಸ ಎಸ್ಒಪಿಯನ್ನ ಕೆಲವು ಬದಲಾವಣೆ ತರುವುದಕ್ಕೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ರೀತಿಯ ಆರೋಪಗಳಿಗೆ ಅವಕಾಶವಾಗದಂತೆ ಬದಲಾವಣೆ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಟೋಯಿಂಗ್ ಸಿಬ್ಬಂದಿ ಕಾರ್ಯವೈಖರಿಯ ವೀಡಿಯೋಗಳನ್ನ ಸಾಮಾಜಿಕ ಜಾಲಾತಾಣದಲ್ಲಿ ಹಾಕಿ ಸಂಚಾರಿ ಪೊಲೀಸರ ಮೇಲೆ ಸಾರ್ವಜನಿಕರು ಕಿಡಿಕಾರಿದ್ದರು. ಇದು ಸರ್ಕಾರಕ್ಕೆ ಒಂದು ರೀತಿ ಮುಜುಗರ ಉಂಟು ಮಾಡಿತ್ತು. ಹಾಗಾಗಿ ಸಿಎಂ ಮಧ್ಯಪ್ರವೇಶ ಮಾಡಿ ಟೋಯಿಂಗ್ ಗೊಂದಲಕ್ಕೆ ತಾತ್ಕಾಲಿಕ ಮದ್ದುಕೊಟ್ಟಿದ್ದಾರೆ.