ಚಿತ್ರದುರ್ಗ: ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದನ್ನು ಸಾರ್ವಜನಿಕರು ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ನಾಡಿನತ್ತ ಬಂದಿದ್ದ ಚಿರತೆಯೊಂದು ಇಂದು ಬೆಳಗ್ಗೆ ಕುರುಬರಹಳ್ಳಿಯ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ ಚಿರತೆ ಜನರ ಕಣ್ಣಿಗೆ ಮತ್ತೆ ಕಾಣಿಸಿಕೊಂಡಿದೆ. ಚಿರತೆ ಕಾಣಿಸಿಕೊಂಡಿದ್ದೆ ತಡ ರೊಚ್ಚಿಗೆದ್ದ ಜನರು ಇದನ್ನು ಉಳಿಸಬಾರದೆಂದು ಚಿರತೆ ಮೇಲೆಯೇ ದಾಳಿ ನಡೆಸಿದ್ದಾರೆ. ಕಲ್ಲು, ದೊಣ್ಣೆಗಳಿಂದ ಹೊಡೆದು ಚಿರತೆಯನ್ನು ಬರ್ಬರ ಹತ್ಯೆ ಮಾಡಿದ್ದಾರೆ.
ಅರಣ್ಯಾಧಿಕಾರಿಗಳ ಎದುರೇ ಚಿರತೆ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿದ್ದರೂ, ಅಧಿಕಾರಿಗಳಿಗೆ ವನ್ಯಜೀವಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.