ಉಡುಪಿ: ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ ಬಾಧಿಸಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕಲ್ಲಡ್ಕ ಪ್ರಭಾಕರ ಅವರು ಐಸಿಯುಗೆ ಭೇಟಿ ಕೊಟ್ಟು ಮಾಧ್ಯಮಗಳ ಜೊತೆ ಮಾತನಾಡಿದರು. ಪೇಜಾವರ ಶ್ರೀಗಳು ಭಾರತಕ್ಕೆ ಬೇಕು. ಭಗವಂತನಿಗೂ ಅವರು ಬೇಕು ಎನ್ನಿಸಿದ್ಯೋ ಏನೋ? ಎಂದು ಖೇದ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣವನ್ನು ಪೇಜಾವರಶ್ರೀ ನೋಡಬೇಕು ಎಂದರು. ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ – ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಪೇಜಾವರರು ಕೇವಲ ಸನ್ಯಾಸಿಯಲ್ಲ, ದಾರ್ಶನಿಕರು. ಅವರು ರಾಷ್ಟ್ರದ ಬಗ್ಗೆ ಚಿಂತನೆಯುಳ್ಳ ಮಹಾನ್ ಸಂತ. ಈಗ ಅವರ ಅಗತ್ಯ ನಮಗೆ ಬಹಳ ಇದೆ. ರಾಮಮಂದಿರ ಹೋರಾಟದ ಮುಂಜೂಣಿಯಲ್ಲಿದ್ದರು. ಅವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದರು.
ಸದ್ಯ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜಕೀಯ ನಾಯಕರು, ಭಕ್ತರು, ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಅಮಿತ್ ಶಾ, ಸಿಎಂ ಯಡಿಯೂರಪ್ಪ ಉಡುಪಿಗೆ ಬರುವ ಸಾಧ್ಯತೆಯಿದೆ. ಆಸ್ಪತ್ರೆ ಸುತ್ತ ಝೀರೋ ಜೋನ್ ನಿರ್ಮಾಣ ಮಾಡಲಾಗಿದೆ.