ಉಡುಪಿ: ರಾಮಮಂದಿರ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯ ಸಮ್ಮತವಾಗಿದೆ. ಮುಸಲ್ಮಾನರಿಗೆ ಐದು ಎಕರೆ ಭೂಮಿ ಕೊಟ್ಟದ್ದು ಖುಷಿಯಾಗಿದೆ ಎಂದು ಪೇಜಾವರಶ್ರೀ ಅವರು ಹರ್ಷ ವ್ಯಕ್ತಪಡಿಸಿದರು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತ ಮಾತನಾಡಿದ ಅವರು, ನನ್ನ ನಿರೀಕ್ಷೆಯಂತೆ ತೀರ್ಪು ಬಂದಿದೆ. ತೀರ್ಪು ನಮ್ಮ ಪರವಾಗಿ ಬರಲು ಪುರಾತತ್ವ ಇಲಾಖೆಯ ಉತ್ಕನನ ಮಹತ್ವದ ಪಾತ್ರ ವಹಿಸಿತು ಎಂದು ಮಾಹಿತಿ ನೀಡಿದರು.
ಮುಸಲ್ಮಾನರಿಗೆ ಈ ತೀರ್ಪಿನಿಂದ ಅಸಮಾಧಾನ ಆಗಿರಲಿಕ್ಕಿಲ್ಲ. ವಿವಾದವನ್ನು ಹೆಚ್ಚು ಎಳೆಯುವುದು ಬೇಡ ಎಂಬ ಭಾವನೆ ಅವರಲ್ಲಿ ಇತ್ತು. ಅವರು ಅಸಮಾಧಾನ ಆಗಿದ್ದರೂ ಹಿಂದೂ- ಮುಸಲ್ಮಾನರ ಸೌಹಾರ್ದತೆಗಾಗಿ ಇದನ್ನು ಸ್ವಾಗತಿಸಿ ಎಂದು ವಿನಂತಿ ಮಾಡಿಕೊಂಡರು.
ಭಾನುವಾರ ದೆಹಲಿಯಲ್ಲಿ ನಡೆಯುವ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಯೋಧ್ಯೆಗೆ ಭೇಟಿ ಕೊಡುವ ಮನಸ್ಸಿದೆ, ಆದರೆ ಆತುರ ಇಲ್ಲ ಎಂದು ಹೇಳಿದರು. ದೇಶ, ಕರ್ನಾಟಕ, ಕರಾವಳಿಯಲ್ಲಿ ಗಲಭೆ ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಪೇಜಾವರಶ್ರೀ ಹೇಳಿದರು.