ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆ ವಿಸ್ತರಣೆಯನ್ನು ಪೇಜಾವರ ಶ್ರೀಗಳು ವಿರೋಧಿಸಿದ್ದು, ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆಕೊಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಲ್ಲಾಪುರದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಶ್ರೀಗಳು ಈ ಹೇಳಿಕೆ ಕೊಟ್ಟಿದ್ದಾರೆ. ದೇಶದ ನೆಲ, ಜಲ, ವಾಯು, ಆಕಾಶ ಪ್ರಕೃತಿ ಸಂಪತ್ತನ್ನ ನಾವು ಉಳಿಸಬೇಕು. ಪ್ರಕೃತಿ ಸಂಪತ್ತು ವ್ಯಯವಾಗಬಾರದು, ನಷ್ಟವಾಗಬಾರದು. ಕೃಷ್ಣ ಎಲ್ಲವನ್ನ ರಕ್ಷಣೆ ಮಾಡಲಿಕ್ಕೆ ಹಿಂದೆ ಮಾರ್ಗದರ್ಶನ ನೀಡಿದ್ದನು. ಆದರೆ ಕೈಗಾ ಅಣುವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಈ ಯೋಜನೆಯ ವಿಸ್ತರಣೆ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ:ವಿರೋಧ ನಡುವೆಯೇ ಹೊಸ ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಚಾಲನೆ!
ಕೈಗಾ ಅಣುವಿದ್ಯುತ್ ಸ್ಥಾವರದ ಆರಂಭದಲ್ಲಿಯೇ ನಾವು ವಿರೋಧ ಮಾಡಿದ್ದೇವು. ಕೈಗಾದ ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ. ಅದರ ಸುತ್ತಮುತ್ತಲ ಜನರ ಮೇಲೆ ಕೈಗಾದ ರೆಡಿಯೇಷನ್ಗಳು ಎಷ್ಟರ ಮಟ್ಟಿಗೆ ದುಷ್ಪರಿಣಾಮಗಳನ್ನು ಬೀರಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಕೈಗಾ ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕು. ಎಲ್ಲಾ ಸಂಘ ಸಂಸ್ಥೆ ಜೊತೆ ಸೇರಿ ಈ ಸಂಬಂಧ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ, ಮಾತನಾಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.