ಕಾರವಾರ: ಶತಮಾನದ ದಾರ್ಶನಿಕ ಸಂತ ಪೇಜಾರವ ಶ್ರೀಗಳು ಅಸ್ತಂಗತರಾಗಿರುವುದಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಪಾರ ಭಕ್ತವೃಂದ ಹೊಂದಿದ್ದ ಅವರು ಜಿಲ್ಲೆಯ ಜನರು ಮತ್ತು ಇಲ್ಲಿನ ಮಠ ಮಂದಿರಗಳ ಜೊತೆಯಲ್ಲಿ ಸದಾ ಓಡನಾಟವನ್ನೂ ಸಹ ಶ್ರೀಗಳು ಹೊಂದಿದ್ದರು.
ಕೈಗಾ ಹೋರಾಟ:
ಉತ್ತರ ಕನ್ನಡ ಜಿಲ್ಲೆಗೆ ಪೇಜಾವರ ಶ್ರೀಗಳು ಕೈಗಾ ವಿಚಾರದಲ್ಲಿ ಬಹುದೊಡ್ಡ ಬೆಂಬಲ ನೀಡಿದ್ದರು. ಪರಿಸರ ಹೋರಾಟದಲ್ಲಿ ಮೊದಲಿನಿಂದಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದರು. ಕೈಗಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 5 ಮತ್ತು 6ನೇ ಘಟಕಕ್ಕೆ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇತ್ತೀಚಿಗೆ ನಡೆದ ಕೈಗಾ ವಿರೋಧಿ ಸಭೆಯಲ್ಲೂ ಪಾಲ್ಗೊಂಡು ಕೇಂದ್ರಕ್ಕೆ ನೇರವಾದ ಸಂದೇಶವನ್ನು ಶ್ರೀಗಳು ರವಾನಿಸಿದ್ದರು. ಅದಕ್ಕಾಗಿ ತಾವು ಪ್ರಾಣ ಕೊಡಲೂ ಸಿದ್ಧ ಎಂದು ಹೇಳಿದ್ದರು. ಇದನ್ನೂ ಓದಿ: ದೆಹಲಿಯ ಕೊರೆಯುವ ಚಳಿ ನಡುವೆ ಪೇಜಾವರ ಶ್ರೀಗಳ ಪೂಜೆ
ಜಿಲ್ಲೆಯ ಶಿರಸಿ ತಾಲೂಕಿನ ವಾದಿರಾಜ ಮಠ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ. ಉಡುಪಿಯಲ್ಲಿ ಮಠವನ್ನು ಹೊಂದಿದ್ದರೂ ಸೋಂದಾದಲ್ಲಿ ವಾದಿರಾಜ ಮಠದ ಮೂಲ ಮಠವಿದೆ. ಶ್ರೀಗಳೂ ಸಹ ಅಲ್ಲೆ ಇರುವ ಕಾರಣ ಪೇಜಾವರ ಶ್ರೀಗಳು ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿ ಪೂಜೆ ಪುನಸ್ಕಾರಗಳನ್ನೂ ಸಹ ನೆರವೇರಿಸಿದ್ದರು. ಇದನ್ನೂ ಓದಿ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ
ಶಿರಸಿಯ ರಾಘವೇಂದ್ರ ಮಠದಲ್ಲಿ ಪೇಜಾವರ ಶ್ರೀಗಳು ತಂಗುತ್ತಿದ್ದರು. ರಾಘವೇಂದ್ರನ ಭಕ್ತರಾಗಿರುವ ಅವರು ಶಿರಸಿಯ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಅಲ್ಲೇ ವಾಸ ಮಾಡುತ್ತಿದ್ದರು. ಕೆಲವೊಮ್ಮೆ ಸನ್ನಿಧಿಯ ಕಟ್ಟೆಯ ಮೇಲೂ ನಿದ್ರಿಸಿದ್ದರು ಎಂದು ಮಠದ ಹಿರಿಯರು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಜೊತೆಯಲ್ಲಿ ಸಾಕಷ್ಟು ಆತ್ಮೀಯತೆಯನ್ನು ಪೇಜಾವರ ಶ್ರೀಗಳು ಹೊಂದಿದ್ದರು. ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತಾ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರದಲ್ಲಿ ಪೇಜಾವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಲ್ಲದೇ ಉಡುಪಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸ್ವರ್ಣವಲ್ಲೀ ಶ್ರೀಗಳು ಭಾಗವಹಿಸಿದ್ದರು.