ಉಡುಪಿ: ಶಿರೂರು ಸ್ವಾಮೀಜಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದರಿಂದ ಹೀಗಾಯಿತೋ ಏನೋ ಗೊತ್ತಿಲ್ಲ ಎಂದು ಪೇಜಾವರ ಶ್ರೀಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇಂದು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಶಿರೂರು ಶ್ರೀ ಹಲವಾರು ಒಳ್ಳೆಯ ಕಾರ್ಯಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಕೆಲಸ ಮಾಡಿದ್ದಾರೆ. ಆದರೆ ಅವರು ಸನ್ಯಾಸ ಧರ್ಮ ಪಾಲಿಸದೇ ಪುಂಡಾಟಿಕೆ ಮೆರೆದಿದ್ದರು. ಅಷ್ಟೇ ಅಲ್ಲದೆ ಅವರಿಗೆ ದುರ್ವ್ಯಸನ ಹಾಗೂ ಸ್ತ್ರೀಯರ ಮೇಲೆ ಆಸಕ್ತಿ ಇತ್ತು ಎಂದು ಆರೋಪಿಸಿದರು.
ಶ್ರೀಗಳ ಸಾವಿನ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ಅನ್ನಾಹಾರ ವಿಷವಾಗಿದೆಯೋ ಗೊತ್ತಿಲ್ಲ. ಕೆಲವರು ಶ್ರೀಗಳಿಗೆ ಮೂತ್ರಪಿಂಡ ಹಾಗೂ ಪಿತ್ತಕೋಶದ ಸಮಸ್ಯೆ ಅಂತಾ ಹೇಳುತ್ತಿದ್ದಾರೆ. ಇನ್ನೂ ಕೆಲವು ಮೂಲಗಳ ಪ್ರಕಾರ ಮಹಿಳೆ ಜೊತೆ ಜಗಳವಾಗಿದೆ ಎನ್ನಲಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ
ಬೇರೆ ಯಾವ ಮಠದಿಂದ ಈ ಕೃತ್ಯ ನಡೆದಿಲ್ಲ. ಜೊತೆಗಿರುವವರಿಂದ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಪಲಾವ್ ತಿಂದಿರುವ ಬಗ್ಗೆ ಶಿರೂರು ಶ್ರೀಗಳ ಸಹೋದರ ಹೇಳಿದ್ದಾರೆ. ಹೀಗಾಗಿ ಅವರ ಮಠದವರಿಂದಲೇ ಕೃತ್ಯ ನಡೆದಿರಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ವನ ಮಹೋತ್ಸವಕ್ಕೆ ಬಂದಾಗ ವಿದ್ಯಾರ್ಥಿಗಳ ಜೊತೆ ಇರಿಸು ಮುರುಸಾಗಿತ್ತು. ಎಲ್ಲ ಸತ್ಯಾಸತ್ಯತೆಗಳು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಹೇಳಿದರು.
ಪರ್ಯಾಯ ಸಭೆಯಲ್ಲಿಯೇ ಹಾಗೂ ವೈಯಕ್ತಿಕವಾಗಿ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಲಹೆ ನೀಡಿದ್ದೆ. ಆದರೆ ಅವರು ಯಾವುದನ್ನೂ ಪಾಲಿಸಿಲ್ಲ. ಶಿರೂರು ಶ್ರೀ ತಮಗೆ ಮಕ್ಕಳಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅವರೇ ಒಪ್ಪಿಕೊಂಡ ಮೇಲೆ ಸ್ವಾಮೀಜಿ ಆಗುವುದು ಹೇಗೆ ಎಂದು ಇತರೆ ಮಠಾಧೀಶರೂ ಪ್ರಶ್ನೆ ಕೇಳಿದ್ದಾರೆ. ಶ್ರೀಗಳು ಸನ್ಯಾಸ ಧರ್ಮ ಪಾಲಿಸದಿರುವುದರಿಂದ ಪಟ್ಟದ ದೇವರನ್ನು ಕೊಟ್ಟಿಲ್ಲ. ನಿನ್ನೆ ಹುಬ್ಬಳ್ಳಿಯಲ್ಲಿದ್ದೆ. ಆರೋಗ್ಯ ದೃಷ್ಟಿಯಿಂದ ವೈದ್ಯರು ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದ್ದರಿಂದ ಉಡುಪಿಗೆ ಬರಲು ಸಾಧ್ಯವಾಗಲಿಲ್ಲ ಎಂದರು.