ಉಡುಪಿ: ರಾಮಕುಂಜದ ವೆಂಕಟರಮಣ ಪೇಜಾವರ ಶ್ರೀಗಳಾಗಿ ಬೃಂದಾವನ ಸೇರುವವರೆಗೆ ಜನರಲ್ಲಿ ಸಾವಿರಾರು ಫೋಟೋಗಳು ಹಾಗೂ ವಿಡಿಯೋಗಳಿವೆ. ಶ್ರೀಗಳು ಕಾಲವಾಗುತ್ತಿದ್ದಂತೆ ಫೋಟೋ, ವಿಡಿಯೋಗಳು ಹೊರಬರುತ್ತಿವೆ.
ಈ ನಡುವೆ ಪೇಜಾವರಶ್ರೀಗಳು ಎಂತಹ ಅನಾರೋಗ್ಯದ ಸ್ಥಿತಿಯಲ್ಲೂ ಪಟ್ಟದ ದೇವರ ಪೂಜೆ, ಅನುಷ್ಠಾನ ನಿಲ್ಲಿಸುತ್ತಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತಿದೆ ಈ ವಿಡಿಯೋ. ಐದನೇ ಪರ್ಯಾಯ ಸಂದರ್ಭ ಶ್ರೀಗಳಿಗೆ ಅನಾರೋಗ್ಯ ಬಾಧಿಸಿತ್ತು. ಕುಳಿತುಕೊಳ್ಳಲೂ ಆಗದ, ಮಲಗಿರಲೂ ಆಗದ ಸ್ಥಿತಿಯಲ್ಲಿದ್ದರು. ಆ ಸಂದರ್ಭದಲ್ಲೂ ಶ್ರೀಗಳು ಪೂಜೆಯನ್ನು ಬಿಟ್ಟಿಲ್ಲ.
ವಿಡಿಯೋದಲ್ಲಿ ಹಾಡುತ್ತಿರುವ ಯುವತಿ ಉಡುಪಿಯ ಗಾರ್ಗಿ ಶಬರಾಯ. ಗಾರ್ಗಿ ಶ್ರೀಗಳ ಪೂಜೆಗೆ ಸಂಗೀತದ ಸೇವೆ ನೀಡಿದ್ದರು. ‘ಲೋಕ ಭಾರವ ಇಳುಹು ಸಾಕು ಸಾಕಾಯ್ತು’ ಎನ್ನುವುದು ಹಾಡಿನ ಸಾಲು. ಹಾಡು ಅಂದಿಗೆ ಹೊಂದಾಣಿಕೆ ಆಗಿತ್ತು.
ಇದೀಗ ಶ್ರೀಗಳ ಇಹಲೋಕದ ಯಾತ್ರೆ ಮುಗಿದಾಗ ಮತ್ತೆ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೊಳಕೆಯೊಡೆದಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಹಾಡಿನ ಸಾಲುಗಳಂತೆ ಶ್ರೀಗಳು ಕೂಡ ಲೋಕದ ಭಾರ ಇಳುಹಿ ಹೊರಟಿದ್ದಾರೆ.