ಬಾಗಲಕೋಟೆ: ಪೇಜಾವರ ಶ್ರೀಗಳಿಗೆ ಲಿಂಗಾಯತ ಧರ್ಮದ ಆಳ ಅರಿವು ತಿಳಿದಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂಬ ಪೇಜಾವರಶ್ರೀಗಳ ಹೇಳಿಕೆಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, 40 ವರ್ಷಗಳಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೋರಾಟ ನಡೆಯುತ್ತಿದೆ. ಪೇಜಾವರ ಶ್ರೀಗಳಿಗೆ ಇಂದಿಗೂ ಲಿಂಗಾಯತ ಧರ್ಮದ ಬಗ್ಗೆ ಅರಿವಾಗಿಲ್ಲ ಎಂದು ಹರಿಹಾಯ್ದರು.
ಲಿಂಗಾಯತ ಧರ್ಮದ ಬಗ್ಗೆ ಲಿಂಗೈಕ್ಯ ಮಾತೆ ಮಹಾದೇವಿ ಅವರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಮಾತೆ ಮಹಾದೇವಿ ಅವರು ಚರ್ಚೆಗೆ ಆಹ್ವಾನಿಸಿದಾಗ ಪೇಜಾವರ ಶ್ರೀಗಳು ಎಂದೂ ಬರಲಿಲ್ಲ. ಈಗ ಮಾತೆ ಮಹಾದೇವಿಯವರು ಬಿತ್ತಿದ ಬೀಜವಾಗಿ ನಾವು ಲಕ್ಷಾಂತರ ಜನರಿದ್ದೇವೆ ಎಂದು ತಿಳಿಸಿದ್ದಾರೆ.
ಚರ್ಚೆಗೆ ಸಿದ್ಧ: ಪೇಜಾವರ ಶ್ರೀಗಳು ಎಲ್ಲಿಯಾದರೂ ವೇದಿಕೆ ಸಿದ್ದಪಡಿಸಲಿ, ನಾವು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ ಅವರು, ಮಾತೆ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಲಿಂಗಾಯತ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವುಗಳನ್ನು ಪೇಜಾವರ ಶ್ರೀಗಳಿಗೆ ಕೊಡುತ್ತೇವೆ ಅವರು ಅಧ್ಯಯನ ಮಾಡಲಿ ಎಂದು ಕುಟುಕಿದರು.