ನವದೆಹಲಿ: ಪೆಗಾಸಸ್ ಸ್ಪೈವೇರ್ ಬಳಸಿ ದೇಶದ ಪ್ರಮುಖ ವ್ಯಕ್ತಿಗಳ ಮೇಲೆ ಅಕ್ರಮ ಕಣ್ಗಾವಲು ವಹಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ತಜ್ಞರ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಮೂರು ಭಾಗಗಳಲ್ಲಿ ವರದಿ ಸಲ್ಲಿಕೆಯಾಗಿದ್ದು, ತಾಂತ್ರಿಕ ಸಮಿತಿಯಿಂದ ಎರಡು ವರದಿಗಳು ಮತ್ತು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಆರ್.ವಿ ರವೀಂದ್ರನ್ ಮೇಲ್ವಿಚಾರಣಾ ಸಮಿತಿಯಿಂದ ಒಂದು ವರದಿಯನ್ನು ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ಸಮಿತಿಯೂ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆ ವೇಳೆ ಭಾರತ ಸರ್ಕಾರವು ಸಮಿತಿಯೊಂದಿಗೆ ಸಹಕರಿಸಲಿಲ್ಲ ಎಂದು ಟೀಕಿಸಿತು. ಅಲ್ಲದೇ ತಮ್ಮ ಫೋನ್ಗಳನ್ನು ಸಲ್ಲಿಸಿದ ಸದಸ್ಯರು ವರದಿಯನ್ನು ಬಿಡುಗಡೆ ಮಾಡದಂತೆ ಹಾಗೂ ವರದಿಯನ್ನು ಗೌಪ್ಯವಾಗಿಡುವಂತೆ ವಿನಂತಿಸಿದ್ದರು. ಇದನ್ನೂ ಓದಿ: 2017ರಲ್ಲಿ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ವೇಳೆ ಪೆಗಾಸಸ್ ಖರೀದಿ – ನ್ಯೂಯಾರ್ಕ್ ಟೈಮ್ಸ್ ವರದಿ
ವರದಿಗಳ ಪ್ರಕಾರ, ತಾಂತ್ರಿಕ ಸಮಿತಿಯೂ 29 ಫೋನ್ಗಳನ್ನು ಪರಿಶೀಲಿಸಿದೆ, 29ರ ಪೈಕಿ 5 ಫೋನ್ಗಳಲ್ಲಿ ಕೆಲವು ಮಾಲ್ವೇರ್ಗಳನ್ನು ಹೊಂದಿರುವುದು ಕಂಡುಕೊಂಡಿದೆ. ಆದರೆ ಇದಕ್ಕೆ ಪೆಗಾಸಸ್ ನೇರ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಫೋನ್ಗಳಲ್ಲಿ ಕಳಪೆ ಸೈಬರ್ ಸುರಕ್ಷತೆಯ ಮಾಲ್ವೇರ್ಗಳು ಕಂಡು ಬಂದಿದೆ ಎಂದು ಸಮತಿಯೂ ಹೇಳಿದೆ.
ವರದಿ ಸಲ್ಲಿಕೆ ಬಳಿಕ ಪ್ರತಿಕ್ರಿಯಿಸಿದ ಸಿಜೆಐ ಎನ್.ವಿ ರಮಣ, ರಾಷ್ಟ್ರೀಯ ಭದ್ರತಾ ಕಾರಣದಿಂದ ನ್ಯಾಯಾಂಗ ಪರಿಶೀಲನೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಇದೊಂದು ದೊಡ್ಡ ವರದಿಯಾಗಿದೆ. ನಾವು ಯಾವ ಭಾಗಗಳನ್ನು ನೀಡಬಹುದು ಎಂಬುದನ್ನು ನೋಡೋಣ. ಇವು ತಾಂತ್ರಿಕ ಸಮಸ್ಯೆಗಳು, ರವೀಂದ್ರನ್ ಅವರ ವರದಿಯನ್ನು ನಾವು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತೇವೆ ಇದರಲ್ಲಿ ಯಾವುದೇ ತೊಂದರೆಗಳಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ