ಬೆಂಗಳೂರು: ಪೇ ಸಿಎಂ (Pay CM) ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಪೇ ಸಿಎಂ ಕಾಂಗ್ರೆಸ್ ಅಭಿಯಾನ (Congress Campaign) ಹಿನ್ನೆಲೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮಾಜಿ ಮುಖ್ಯಸ್ಥ ಬಿ.ಆರ್.ನಾಯ್ಡು (BR Naidu), ಪವನ್, ಗಗನ್ ಎಂಬಾತನನ್ನು ಹೈ ಗ್ರೌಂಡ್ಸ್ ಪೊಲೀಸರು (High Grounds Police) ಬಂಧಿಸಿದ್ದರು. ಇದೀಗ ಸಿಆರ್ಪಿಸಿ 107 ಅಡಿ ಬಾಂಡ್ ಬರೆಸಿಕೊಂಡು ಪೊಲೀಸರು ಮೂವರನ್ನು ಬಿಡುಗಡೆ ಮಾಡಿದ್ದಾರೆ.
ಈವರೆಗೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಾದ ಸಂಜಯ್ ಹಾಗೂ ವಿಶ್ವಮೂರ್ತಿಯನ್ನು ಪಕ್ಷದ ನಾಯಕರು ಸರೆಂಡರ್ ಮಾಡಿಸಿದ್ದರು. ಆದರೆ ಇನ್ನೂ ಮೂವರಿಗಾಗಿ ಪೊಲೀಸರು ಕಾಯುತ್ತಿದ್ದು, ಪೋಸ್ಟರ್ ಅಂಟಿಸಿದ ಐದು ಮಂದಿಯನ್ನು ನಾಲ್ಕು ಗಂಟೆ ವೇಳೆಗೆ ಕೋರ್ಟ್ ಮುಂದೆ ಹೈ ಗ್ರೌಂಡ್ಸ್ ಪೊಲೀಸರು ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ʼPAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ
ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ (Srinivas Gowda) ಅವರು, ಸದ್ಯ ಬಿ.ಆರ್. ನಾಯ್ಡು ರನ್ನ ಬಿಡುಗಡೆ ಮಾಡಲಾಗಿದೆ. ಪವನ್, ಗಗನ್ ಬಿಡುಗಡೆಗೆ ಪ್ರಕ್ರಿಯೆ ನಡೆಸಲಾಗುತ್ತಿದೆ. ನಂತರ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಲಾಗಿದೆ. ಇನ್ನೂ 3 ಜನರನ್ನ ಕರೆತರಲಾಗುತ್ತಿದೆ. ಸಂಜೆ ಐವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ನಾವೇ ಪೇಸಿಎಂ ಪೋಸ್ಟರ್ ಅಂಟಿಸ್ತೇವೆ: ಡಿಕೆಶಿ
ರಾಹುಲ್ ಗಾಂಧಿಯ ಕರ್ನಾಟಕ ಸ್ಟ್ರಾಟಜಿ ತಂಡದ ಸುನಿಲ್ ಕುಂದಗೋಳ ತಂಡ ಈ ಅಭಿಯಾನದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್, ಈ ವಿಚಾರದಲ್ಲಿ ದಿನಕ್ಕೊಂದು ಅಸ್ತ್ರ ಪ್ರಯೋಗಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಲು ಪ್ರಯತ್ನ ನಡೆಸಿದೆ. ಬುಧವಾರ ಯುಪಿಐ ಪೇಮೆಂಟ್ ಆಪ್ `ಪೇಟಿಎಂ ಮಾದರಿಯಲ್ಲಿ `ಪೇ ಸಿಎಂ’ ಪೋಸ್ಟರ್ಗಳನ್ನು ಅಂಟಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಚಾಟಿ ಬೀಸಿದೆ. ಇತ್ತ ಪೋಸ್ಟರ್ ಅಭಿಯಾನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಸರ್ಕಾರ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದೆ.