ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ತಮ್ಮ ಮೇಲಿನ ಗಾಸಿಪ್ ಗಳನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ನಾನಾ ಆರೋಪಗಳನ್ನು ಹೊತ್ತ ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ಬಗ್ಗೆ ಕ್ರಮ ತಗೆದುಕೊಳ್ಳಲು ಮುಂದಾಗಿದ್ದಾರೆ. ತಮ್ಮ ಮೇಲಿನ ಅತಿರಂಜಿತ ವರದಿಗಳ ಬಗ್ಗೆ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.
ಇತ್ತೀಚೆಗಷ್ಟೇ ನಿಧನರಾದ ನರೇಶ್ ಅವರ ಮಲತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಅಂತಿಮ ದರ್ಶನಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೋಗಿದ್ದರು. ಈ ಸಮಯದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಣ್ ಸನ್ನೆಯಲ್ಲೇ ಮಾತನಾಡಿದ್ದರು. ಅದನ್ನು ಕೆಲವರು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರಂತೆ. ಇದರಿಂದಾಗಿ ಪವಿತ್ರಾ ಮತ್ತು ನರೇಶ್ ಗೆ ನೋವುಂಟಾಗಿದ್ದು, ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಮಾಡುವವರ ವಿರುದ್ಧ ತೆಲಂಗಾಣ ಸೈಬರ್ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ
ತಮ್ಮ ಬಗ್ಗೆ ಕೆಟ್ಟದಾಗಿ ಬರೆದ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಬರೆದಿದ್ದು, ಮಾನಹಾನಿ ಮಾಡುವಂತಹ ಮನಸ್ಸುಗಳನ್ನು ಹೆಡೆಮುರಿ ಕಟ್ಟಿ ಎಂದು ಒತ್ತಾಯ ಕೂಡ ಮಾಡಿದ್ದಾರೆ. ತಮ್ಮ ಮೇಲಿನ ದ್ವೇಷದಿಂದ ಅವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.