ತುಮಕೂರು: ಪಾವಗಡ ಬಸ್ ಅಪಘಾತದಲ್ಲಿ ಮೃತಪಟ್ಟ ಅಕ್ಕ, ತಂಗಿ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಲು ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿದ್ದಾರೆ.
ಅಮೂಲ್ಯಾ, ಹರ್ಷಿತಾ ಮೃತರಾಗಿದ್ದಾರೆ. ಈ ಸಹೋದರಿಯರು ಪೋತಗಾನ ಹಳ್ಳಿಯ ನಿವಾಸಿಗಳಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಮನೆ ಮಕ್ಕಳನ್ನು ಕಳಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಮೇಲೆ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿಯಾಗಿ 6ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾದಲ್ಲಿ ಸಹೋದರಿಯರು ಸಾವನ್ನಪಿದ್ದಾರೆ. ಮನೆ ಮಕ್ಕಳನ್ನು ಕಳಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಾವಗಡ ಬಸ್ ದುರಂತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಶ್ರೀರಾಮುಲು
ಅಕ್ಕಂದಿರ ಅಗಲಿಕೆ ನೆನೆದು ಕಣ್ಣೀರಿಟ್ಟ ತಮ್ಮ ತೇಜು, ನನಗೆ ಊಟಕ್ಕೆ ಕರಿಯೋರು ಈಗ ಯಾರೂ ಇಲ್ಲ. ಇಬ್ಬರೂ ಅಕ್ಕಂದಿರು ನನ್ನನ್ನು ಬಿಟ್ಟು ಹೊರಟು ಹೋಗಿದ್ದಾರೆ. ನಾನು ಈಗ ಒಬ್ಬನೇ ಆಗಿದ್ದೇನೆ ಎಂದು ಮೃತ ಸಹೋದರಿಯರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ.
ಬಸ್ ನಂಬರ್ ಸೂಚಿಸಿ ಡ್ರೈವರ್ ಮೇಲೆ ಎಫ್ಐಆರ್ ದಾಖಲಾಗಿದ್ದು, ಡ್ರೈವರ್ ರಘುನನ್ನು ಪಾವಗಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಘಾತವಾಗಿದ್ದು ಹೇಗೆ?: ನಿನ್ನೆ ಬೆಳಗ್ಗೆ ಶ್ರೀನಿವಾಸ್ ಮೂರ್ತಿ ಒಡೆತನದ ಎಸ್.ವಿ.ಟಿ. ಎಂಬ ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್ ಟಾಪ್ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡದ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ಪಾವಗಡದ ರಸ್ತೆ ಮೇಲೆ, ಬೇಲಿ ಮೇಲೆಯೂ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.