ತುಮಕೂರು: ಖಾಸಗಿ ಬಸ್ ಅಪಘಾತವಾಗಿ 7 ಮಂದಿ ಜಿಲ್ಲೆಯಲ್ಲಿ ಸಾವನ್ನಪ್ಪಿದರೆ, ಇನ್ನೊಂದೆಡೆ ಸಂಭವಿಸಬಹುದಾಗಿದ್ದ ಅಪಘಾತವನ್ನು ಪ್ರಯಾಣಿಕರ ಸಮಯಪ್ರಜ್ಞೆ ತಪ್ಪಿಸಿದೆ.
ಮದ್ಯ ಸೇವಿಸಿ ಖಾಸಗಿ ಬಸ್ಸನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದ ಚಾಲಕನನ್ನ ತಡೆದು ಪ್ರಯಾಣಿಕರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ ಚಲಾಯಿಸುತ್ತಿದ್ದ ಡ್ರೈವರ್ ಮಹೇಶ್ ಗೆ ಪ್ರಯಾಣಿಕರು ಕ್ಲಾಸ್ ತೆಗೆದುಕೊಂಡು ಬಸ್ ತಡೆದಿದ್ದಾರೆ.
ತುಮಕೂರಿನಿಂದ ಕೊಡಿಗೇನಹಳ್ಳಿಗೆ ಹೋಗುತ್ತಿದ್ದ ಬಿಎಂಎಸ್ ಖಾಸಗಿ ಬಸ್ನಲ್ಲಿ ಚಾಲಕ ಮಹೇಶ್ ಕುಡಿದು ಬಸ್ ಚಲಾಯಿಸುತ್ತಿದ್ದನ್ನು ಪ್ರಯಾಣಿಕರು ಗಮನಿಸಿದ್ದಾರೆ. ಬ್ಯಾಲ್ಯ ಗ್ರಾಮಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ಮುಂದೆ ಹೋಗದಂತೆ ತಡೆದು ಚಾಲಕನ ವಿರುದ್ಧ ಗಲಾಟೆ ಮಾಡಿದ್ದಾರೆ.
ಇದೇ ವೇಳೆ ಮೇಲೇಳಲು ಆಗದ ಸ್ಥಿತಿಯಲ್ಲಿದ್ದ ಚಾಲಕ ಮಹೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕುಳಿತಿದ್ದಾನೆ. ಬಳಿಕ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಿದ ನಿರ್ವಾಹಕ ಪ್ರಯಾಣಿಕರನ್ನ ಕಳುಹಿಸಿದ್ದಾನೆ.