ಕಾರವಾರ: ಕಲಾವಿದನ ಕೈಗೆ ಏನು ಸಿಕ್ಕರೂ ಅದಕ್ಕೊಂದು ರೂಪ ಕೊಡುವುದು ಕಲಾವಿದನ ಚಾಣಾಕ್ಷತೆಗೆ ಹಿಡಿದ ಕನ್ನಡಿಯಂತೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗನೊಬ್ಬ ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಿದ್ದು, ಇವರ ಅತೀ ಸೂಕ್ಷ್ಮ ಕೆತ್ತನೆ ಎಲ್ಲರನ್ನು ಬೆರಗಾಗಿಸುವಂತೆ ಮಾಡಿದೆ.
ಹೌದು. ಈ ಅಪರೂಪದ ಕಲಾಕೃತಿಯನ್ನು ನಿರ್ಮಿಸಿದವರು ಮಿಲಿಂದ್ ಉದಯಕಾಂತ್ ಅಣ್ವೇಕರ್. ಕಾರವಾರ ನಗರದಲ್ಲಿ ಅಕ್ಕಸಾಲಿಗರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರತಿ ವರ್ಷ ಒಂದಲ್ಲಾ ಒಂದು ವಿಶೇಷ ಕಲಾಕೃತಿಯನ್ನು ರಚಿಸುತ್ತಾರೆ. ಇದನ್ನೂ ಓದಿ: 411 ಕೋಟಿ ರೂ. ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ
ಈ ಬಾರಿ ಆಜಾದೀ ಕಾ ಅಮೃತ್ ಮಹೋತ್ಸವದ ಅಂಗವಾಗಿ ದೇಶದ ಪ್ರತಿಷ್ಠಿತ ಸಂಸತ್ ಭವನವನ್ನು ಇವರು ಕೇವಲ 35 ಗ್ರಾಮ್ ಬೆಳ್ಳಿಯನ್ನು ಬಳಸಿ ನಿರ್ಮಿಸಿದ್ದಾರೆ. ಇದರ ನಿರ್ಮಾಣಕ್ಕೆ ಐದು ದಿನ ತೆಗೆದುಕೊಂಡಿದ್ದು, ಎತ್ತರ ಎರಡು ಇಂಚು ಇದ್ದು ಅಗಲ 1.5 ಇಂಚು ಇದೆ. ಈ ಚಿಕ್ಕ ಕಲಾಕೃತಿಯ ಮೇಲೆ ತ್ರಿವರ್ಣ ಧ್ವಜ ಸಹ ಕೆತ್ತಲಾಗಿದ್ದು, ಇವರ ಕಲೆಗೆ ಎಂತವರೂ ಸೈ ಎನ್ನುವಂತಿದೆ.
ಈ ಹಿಂದೆ ಇವರು ಒಂದು ಗ್ರಾಂ ಗಿಂತಲೂ ಕಡಿಮೆ ಬಂಗಾರದಲ್ಲಿ 20 ಇಂಚು ಚೈನ್ ಅನ್ನು ನಿರ್ಮಿಸಿ ಲಿಮ್ಕಾ ದಾಖಲೆ ಮಾಡಿದ್ದರು. ಇದಲ್ಲದೇ 8 ಗ್ರಾಂ ಬಂಗಾರದ ಉಂಗುರದಲ್ಲಿ ತಾಜ್ ಮಹಲ್, ಹಂಪಿ ಕಲ್ಲಿನ ರಥ ನಿರ್ಮಾಣ ಮಾಡಿ ದಾಖಲೆ ಮಾಡಿದ್ದಾರೆ.