ಬೆಂಗಳೂರು: ನೀನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ನಿಖರ ಮಾಹಿತಿಗಳೇ ಹೊರ ಬಿದ್ದಿವೆ. ಆರಂಭದಲ್ಲಿ ಈ ಸಿನಿಮಾಗೆ ಗಣೇಶ ಮೆಡಿಕಲ್ಸ್ ಅನ್ನೋ ನಾಮಕರಣವಾಗಿತ್ತು. ಆದರೀಗ ಅದೇ ಟೀಮು ಜೊತೆ ಸೇರಿ ಪರಿಮಳ ಲಾಡ್ಜ್ ಅನ್ನೋ ಸಿನಿಮಾ ಶುರು ಮಾಡಿದೆ. ದೊಡ್ಡ ತಾರಾಗಣವಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸಲಿದ್ದಾರೆ. ಸುಮನ್ ರಂಗನಾಥ್ ಕೂಡಾ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.
ಈ ಹಿಂದೆ ಬ್ಯೂಟಿಫುಲ್ ಮನಸುಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರಸನ್ನ ಪರಿಮಳ ಲಾಡ್ಜಿಗೆ ಹಣ ಹೂಡಿದ್ದಾರೆ. ವಿಜಯ ಪ್ರಸಾದ್ ಚಿತ್ರಗಳೆಂದ ಮೇಲೆ ವಾಸ್ತವಿಕ ವಿಚಾರಗಳನ್ನೇ ಲಘುವಾದ ಶೈಲಿಯಲ್ಲಿ ಹೇಳೋ ಮಸ್ತ್ ಆಗಿರೋ ಕಥೆ ಇರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಪರಿಮಳ ಲಾಡ್ಜ್ ಕಥೆಯನ್ನಂತೂ ಇಂಥಾದ್ದೇ ಮಜವಾದ ಕಥಾ ಎಳೆಯೊಂದಿಗೆ ಅವರು ರೂಪಿಸಲು ಮುಂದಾಗಿದ್ದಾರೆ. ಇದರಲ್ಲಿನ ಮಹತ್ವದ ಪಾತ್ರವೊಂದರಲ್ಲಿ ಸುಮನ್ ರಂಗನಾಥ್ ನಟಿಸಿದ್ದಾರೆ.
ಈ ಸಿನಿಮಾ ಮೂಲಕವೇ ವರ್ಷಾಂತರಗಳ ನಂತರ ಲೂಸ್ ಮಾದ ಯೋಗಿ ಮತ್ತು ವಿಜಯ ಪ್ರಸಾದ್ ಮತ್ತೆ ಒಂದಾಗಿದ್ದಾರೆ. ಯೋಗಿ ಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸದ್ಯಕ್ಕೆ ಇಷ್ಟು ಮಂದಿಯ ತಾರಾಗಣ ನಿಗದಿಯಾಗಿದೆ. ಸುಮನ್ ರಂಗನಾಥ್ ಕೂಡಾ ನಟಿಸೋದು ಪಕ್ಕಾ ಆಗಿದೆ. ಸುಮನ್ ಈ ಹಿಂದೆ ಸಿದ್ಲಿಂಗು, ನೀರ್ ದೋಸೆ ಮತ್ತು ತೋತಾಪುರಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಅವರು ಪರಿಮಳ ಲಾಡ್ಜ್ ಗೂ ಎಂಟ್ರಿ ಕೊಡಲಿದ್ದಾರೆ. ಇದು ವಿಜಯ ಪ್ರಸಾದ್ ಮತ್ತು ಸುಮನ್ ಕಾಂಬಿನೇಷನ್ನಿನ ನಾಲ್ಕನೇ ಚಿತ್ರವಾಗಿಯೂ ದಾಖಲಾಗುತ್ತದೆ.