– ಸಮಾಧಾನಪಡಿಸಿ ಪರಿಹಾರದ ಚೆಕ್ ನೀಡಿದ ಕೋಲಾರ ಡಿಸಿ
ಕೋಲಾರ: ನಮಗೆ ಚೆಕ್ ಬೇಡ, ಪರಿಹಾರವೂ ಬೇಡ ನಮಗೆ ನಮ್ಮ ಮಗಳು ಬೇಕು ಅವಳನ್ನು ತಂದು ಕೊಡಿ. ನಾವೇ ನಿಮಗೆ ಬೇಕಾದರೆ ಮನೆ, ಜಮೀನು, ಆಸ್ತಿ ಪಾಸ್ತಿ ಎಲ್ಲವನ್ನೂ ಮಾರಿ ನಿಮಗೆ ಹತ್ತರಷ್ಟು ಹಣ ಕೊಡ್ತೀವಿ ಎಂದು ಜಿಲ್ಲಾಡಳಿತದ ಎದುರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಹನಾ ತಂದೆ ಸುರೇಶ್ ಕಣ್ಣೀರಿಟ್ಟರು.
ನಮಗೆ ಪರಿಹಾರ ಬೇಡ, ನಮಗೆ ನನ್ನ ಮಗಳು ಬೇಕು ಎಂದು ಸಹನಾ ತಂದೆ ಗೋಳಾಡಿದರು. ಆಗ ನೆರೆಹೊರೆಯವರು ಸಮಾಧಾನಪಡಿಸಿದರು. ನಂತರ ಕೋಲಾರ ಜಿಲ್ಲಾಧಿಕಾರಿ, ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿದರು.
ಆರ್ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕೋಲಾರ ಮೂಲದ ಟೆಕ್ಕಿ ಸಹನಾ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರಿಗೆ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪರಿಹಾರದ ಚೆಕ್ ವಿತರಿಸಲು ಜಿಲ್ಲಾಧಿಕಾರಿಗಳು, ಕೋಲಾರ ನಗರದ ಎಸ್.ಜಿ.ಲೇಔಟ್ಗೆ ತೆರಳಿದ್ದರು. ಈ ವೇಳೆ ಸಹನಾ ತಂದೆ, ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟರು. ‘ನಮಗೆ ಪರಿಹಾರದ ಚೆಕ್ ಬೇಡ, ನನಗೆ ನಮ್ಮ ಮಗಳು ಬೇಕು’ ಎಂದು ಗೋಳಾಡಿದರು.
ಈ ವೇಳೆ ಜೊತೆಗಿದ್ದ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಸಮಾಧಾನ ಪಡಿಸಿದ ನಂತರ ತನ್ನ ಪತ್ನಿ ಹಾಗೂ ಮಗಳೊಂದಿಗೆ ಪರಿಹಾರದ ಚೆಕ್ ಪಡೆದುಕೊಂಡರು. ಈ ವೇಳೆ ಮಾತನಾಡಿದ ಸಹನಾ ತಂದೆ ಸುರೇಶ್ ಬಾಬು, ನಮ್ಮ ಮನೆ, ಆಸ್ತಿ, ಜಮೀನು ಎಲ್ಲವನ್ನು ಮಾರಿ ನಿಮಗೆ ಅದರ ಹತ್ತುಪಟ್ಟು ಬೇಕಾದ್ರೆ ಹಣ ಕೊಡುತ್ತೇವೆ. ನಮಗೆ ನಮ್ಮ ಮಗಳನ್ನು ತಂದು ಕೊಡಿ ಎಂದು ತಮ್ಮ ನೋವನ್ನು ಹೊರಹಾಕಿದರು.
ಸರ್ಕಾರ ಮಾಡಿದ ಅದೊಂದು ಬೇಜವಾಬ್ದಾರಿ ವ್ಯವಸ್ಥೆಯಿಂದಾಗಿ ಇವತ್ತು ಅದೆಷ್ಟೋ ಜನರು ಮಕ್ಕಳನ್ನು ಕಳೆದುಕೊಂಡು ಕಣ್ಣೀರಾಕುವ ಸ್ಥಿತಿ ಎದುರಾಗಿದೆ. ಸರ್ಕಾರ ಇನ್ನಾದರು ಇಂಥ ಕಾರ್ಯಕ್ರಮಗಳನ್ನು ಮಾಡುವಾಗ ಜವಾಬ್ದಾರಿಯಿಂದ ಮಾಡಿ. ನಮ್ಮಂತೆ ಯಾವ ತಂದೆ-ತಾಯಿಯೂ ಕಣ್ಣೀರು ಹಾಕದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.