ರಾಯಚೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಮಗ ಸಾವನ್ನಪ್ಪಿದ ದುಃಖದಲ್ಲಿದ್ದರೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
16 ವರ್ಷದ ಪ್ರಶಾಂತ್ ಕುಮಾರ್ ಮೃತ ದುರ್ದೈವಿ. ಮಗನ ಸಾವು ಸಾರ್ಥಕತೆ ಪಡೆಯಲಿ ಅಂತ ಪೋಷಕರು ನೇತ್ರ ಹಾಗೂ ಅಂಗಾಂಗ ದಾನ ಮಾಡಿದ್ದಾರೆ. ಕುಮಾರ್ ರಾಯಚೂರಿನ ಕುಕನೂರಿನ ಗ್ರಾಮದಿಂದ ರಾಯಚೂರಿಗೆ ತೆರಳುತ್ತಿದ್ದಾಗ ಬೈಕ್ ಅಪಘಾತವಾಗಿತ್ತು. ಮೂರು ತಿಂಗಳಿಂದ ಪ್ರಶಾಂತ್ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಪ್ರಶಾಂತ್ ಮೃತಪಟ್ಟಿದ್ದಾನೆ.
ಇದುವರೆಗೂ ಪೋಷಕರು ತಮ್ಮ ಆಸ್ತಿಯನ್ನು ಮಾರಿ ಮಗನ ಚಿಕಿತ್ಸೆಗಾಗಿ 20 ಲಕ್ಷ ರೂಪಾಯಿವರೆಗೂ ಖರ್ಚು ಮಾಡಿಕೊಂಡಿದ್ದಾರೆ. ಆದರೂ ಮಗನ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಿಮ್ಸ್ ಆಸ್ಪತ್ರೆಗೆ ಅಂಗಾಂಗ ದಾನ ಮಾಡಿದ್ದು, ಸದ್ಯ ವೈದ್ಯರು ನೇತ್ರವನ್ನ ಪಡೆದಿದ್ದಾರೆ. ಮಗನ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪೋಷಕರು ಮಗನ ಸಾವಿನಲ್ಲಿ ಮಾನವೀಯತೆ ಮೆರೆದಿದ್ದಾರೆ.
ನಾವು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೆವು. ಮಗನನ್ನು ಚೆನ್ನಾಗಿ ಓದಿಸೋಣ ಎಂದು ತುಂಬಾ ಆಸೆ ಪಟ್ಟಿದೆ. ನನ್ನ ಮಗನಿಗೆ ದೇವರ ಮೇಲೆ ಅಪಾರ ನಂಬಿಕೆ ಇತ್ತು. ಆದರೆ ರಾಯಚೂರಿಗೆ ಹೋಗಿ ಬರುತ್ತಿದ್ದ ವೇಳೆ ಅಪಘಾತವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸುತ್ತಿದ್ದೆವು. ಸುಮಾರು 20-30 ಲಕ್ಷ ರೂ. ಖರ್ಚಾಗಿದೆ. ಆದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ನಾವೇ ನಿರ್ಧಾರ ಮಾಡಿ ನೇತ್ರ ಮತ್ತು ಅಂಗಾಂಗ ದಾನ ಮಾಡಿದ್ದೇನೆ ಎಂದು ಪ್ರಶಾಂತ್ ಕುಮಾರ್ ತಂದೆ ಈರಣ್ಣ ಅವರು ನೋವಿನಲ್ಲಿ ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv