ಚಿಕ್ಕಮಗಳೂರು: ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಕಾಫಿನಾಡಲ್ಲಿ ದಿನವೊಂದಕ್ಕೆ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಸೇರಿದಂತೆ ಹತ್ತಾರು ವಸ್ತುಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನ ಶಂಕರಪುರ, ಟಿಪ್ಪುನಗರ, ಶರೀಫ್ ಗಲ್ಲಿ, ಮಾರ್ಕೇಟ್ ರಸ್ತೆ ಸೇರಿದಂತೆ ಕೊಳಚೆ ಪ್ರದೇಶದ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ. ಕಡಿಮೆ ಬೆಲೆಯಲ್ಲಿ ಸಿಗುವ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಗಳಿಂದ ನಶೆ ಏರಿಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ 14 ರಿಂದ 20 ವರ್ಷದ ಮಕ್ಕಳೇ ಹೆಚ್ಚು ಅನ್ನೋದು ಆಘಾತಕಾರಿ ಅಂಶವಾಗಿದೆ.
ಶಾಲೆಗೆ ಹೋಗುವ, ಹೋಗದಿರುವ ಇಲ್ಲಿನ ಮಕ್ಕಳು ಸೇರಿದಂತೆ 20 ರಿಂದ 30 ವರ್ಷದವರು ಇವುಗಳನ್ನ ಖರೀದಿಸಿ ಅದನ್ನ ಬಟ್ಟೆಯೊಳಗೆ ಹಾಕಿ ಅದರ ವಾಸನೆ ಸೇವಿಸುವ ದುಷ್ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಬಾಟಲಿ ಮದ್ಯ ಸೇವಿಸಿದ್ದಕ್ಕಿಂತ ಹೆಚ್ಚು ನಶೆ ಬರುತ್ತದೆ. ಸಾಲದಕ್ಕೆ ಹಣವು ಹೆಚ್ಚು ಬೇಕಿಲ್ಲ. ಹತ್ತಿಪ್ಪತ್ತು ರೂಪಾಯಿ ಇದ್ದರೆ ಸಾಕಾಗಿದೆ. ಇತ್ತೀಚೆಗೆ 22 ವರ್ಷದ ಯುವಕನೊಬ್ಬ ಈ ದುಷ್ಟಟಕ್ಕೆ ಬಿದ್ದು, ಮಾನಸಿಕ ಖಿನ್ನತೆಯಿಂದ ಪೊಲೀಸ್ ಠಾಣೆ ಪಕ್ಕದಲ್ಲೇ ಟವೆಲ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಪುಸ್ತಕ ಮಳಿಗೆ, ಹಾರ್ಡ್ವೇರ್, ಬಣ್ಣದ ಅಂಗಡಿಗಳಲ್ಲಿ ಸಿಗುವ ಇವುಗಳಿಂದ ಬೆಳೆಯೋ ಹಂತದಲ್ಲೇ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದನ್ನ ಒಮ್ಮೆ ಸೇವಿಸಿದರೆ ಮತ್ತೆ-ಮತ್ತೆ ಸೇವಿಸಬೇಕೆಂದನಿಸುತ್ತದೆ. ಜೇಬಲ್ಲಿ 20 ರೂಪಾಯಿ ಇದ್ರೆ ಸಾಕು ಒಂದ್ ಟ್ಯೂಬ್ ಸಿಗುತ್ತದೆ. ಪಾಳು ಬಿದ್ದ ಮಳಿಗೆ, ಗಿಡಗಂಟೆಗಳ ಮರೆಯಲ್ಲಿ ಐದೇ ನಿಮಿಷಕ್ಕೆ ವಾಸನೆ ಸೇವಿಸಿದರೆ ಅದರ ನಶೆ 6 ರಿಂದ 8 ಗಂಟೆ ಇರುತ್ತದೆ. ಈ ದುಷ್ಟಕ್ಕೆ ಬಿದ್ದಿರುವ ದಿನಕ್ಕೆ ಕನಿಷ್ಠ ಮೂರು ಬಾರಿ ವಾಸನೆ ಎಳೆಯುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಮಾನಸಿಕ ಖಿನ್ನತೆ ಒಳಗಾಗಿ ವ್ಯಕ್ತಿತ್ವ, ಬೆಳವಣಿಗೆ ಎಲ್ಲವೂ ಕ್ರಮೇಣ ಕುಗ್ಗುತ್ತದೆ. ಪಿಡ್ಸ್ ಬಂದಂತಾಗುತ್ತದೆ. ನಮ್ಮ ಬಳಿ ದಿನಕ್ಕೆ ಇಂತಹಾ ನಾಲ್ಕೈದು ಕೇಸ್ ಬರುತ್ತಿದ್ದು, ಇದಕ್ಕೆ ಔಷಧಿ ಇಲ್ಲ. ಕೌನ್ಸಿಲಿಂಗ್ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಮನೋರೋಗ ತಜ್ಞ ವೆಂಕಟೇಶ್ ಹೇಳಿದ್ದಾರೆ.
ಆಧುನಿಕತೆ ಬೆಳೆದಂತೆ ಯುವಜನತೆ ಕೂಡ ಹಾದಿ ತಪ್ಪುತ್ತಿದ್ದಾರೆ. ಎಲ್ಲಾ ಸಮಸ್ಯೆಗೂ ಸರ್ಕಾರವೇ ಕಾರಣ ಅನ್ನೋದಕ್ಕಿಂತ ಪೋಷಕರು ಕೂಡ ಮಕ್ಕಳ ಚಲನ-ವಲನಗಳ ಮೇಲೆ ಗಮನ ಹರಿಸಬೇಕಿದೆ. ಇಲ್ಲವಾದರೆ ಇಂತಹಾ ಅನಾಹುತಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಈಗಾಗಲೇ ನಾಲ್ಕೈದು ಯುವಕರು ಈ ದುಶ್ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv