ಚಿತ್ರದುರ್ಗ: ರಾಜ್ಯವನ್ನೇ ಬೆಚ್ಚಿಬೀಳಿಸುವ ಘನಘೋರ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳು ಅಂತಲೂ ನೋಡದೇ ಪೋಷಕರಿಂದಲೇ ಕೊಲೆ ಯತ್ನ ನಡೆದಿದೆ.
ಪೋಷಕರೇ 3 ತಿಂಗಳ ಗರ್ಭಿಣಿ ಮಗಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕೃತ್ಯ ನಡೆಸಿದ್ದಾರೆ. ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
6 ತಿಂಗಳ ಹಿಂದೆ ಯುವತಿ ಆಶಾ ದಲಿತ ಯುವಕ ಮಧು ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ ಮದುವೆಗೆ ಪೋಷರ ವಿರೋಧವಿತ್ತು. ಹೀಗಾಗಿ ಇಬ್ಬರೂ ಊರನ್ನು ಬಿಟ್ಟು ಬೇರೆ ಕಡೆ ವಾಸವಿದ್ದರು. 2-3 ದಿನಗಳ ಹಿಂದೆ ಗ್ರಾಮಕ್ಕೆ ಬಂದು ಮಧು ಅವರ ತಂದೆ ತಾಯಿಯ ಮನೆಯಲ್ಲಿದ್ದರು.
ಶುಕ್ರವಾರ ರಾತ್ರಿ ಮಧು ಮನೆಗೆ ನುಗ್ಗಿದ ಆಶಾ ಅವರ 12ಕ್ಕೂ ಹೆಚ್ಚು ಸಂಬಂಧಿಕರು 3 ತಿಂಗಳ ಗರ್ಭಿಣಿ ಆಶಾ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಆಶಾ ಅವರನ್ನ ಭರಮಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು ಎಂಬುದನ್ನೂ ನೋಡದೇ ಪೋಷಕರೇ ಹಲ್ಲೆ ಮಾಡಿರುವುದು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಭರಮಸಾಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.