ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂಬ ಬಿಜೆಪಿ (BJP) ಒತ್ತಾಯಕ್ಕೆ ಗೃಹ ಸಚಿವ ಪರಮೇಶ್ವರ್ (G.Parameshwar) ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಪಘಾತದಲ್ಲಿ ಸಚಿವರ ಪ್ರಾಣ ಉಳಿದಿದೆ. ಪೊಲೀಸರು ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ. ಹಣ ಸಾಗಾಟ ಮಾಡಿದ್ದನ್ನು ಬಿಜೆಪಿಯವರು ಏನಾದ್ರೂ ನೋಡಿದ್ರಾ? ಅದರಲ್ಲಿ ನಾವು ಮುಚ್ಚಿಡೋದು ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣ ಗೊತ್ತಾದ ಮೇಲೆ ನಮ್ಮ ಪೊಲೀಸರು ಅಲ್ಲಿಗೆ ಹೋಗಿದ್ರು. ನಾವು ಹೋಗೋ ಹೊತ್ತಿಗೆ ಗಾಡಿ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಿದ್ದರು. ಲಕ್ಷ್ಮಿಯವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಪಘಾತ ಕೇಸ್ನಲ್ಲಿ ವಾಹನ ಸಾಗಾಟ ಮಾಡೋ ಹಾಗೇ ಇಲ್ಲ. ಆದರೆ ಇಲ್ಲಿ ಮಾಡಿದ್ದಾರೆ. ಯಾಕೆ ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಮಾಡ್ತಾರೆ. ಸಚಿವರು ಕಾರಿನಲ್ಲಿ ಇದ್ದರು ಅಂತ ಇಷ್ಟು ಸುದ್ದಿ ಆಗಿದೆ ಅಷ್ಟೆ ಎಂದಿದ್ದಾರೆ.
ಬಿಜೆಪಿಯವರು ಆರೋಪ ಮಾಡ್ತಾನೆ ಇರುತ್ತಾರೆ. ಅವರ ಆರೋಪಗಳಿಗೆ ಉತ್ತರ ಕೊಡೋಕೆ ಅಗೊಲ್ಲ. ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಆಗುತ್ತೆ ಎಂದು ಹೇಳಿದ್ದಾರೆ.