ರಾಮನಗರ: ಐಟಿ ಅಧಿಕಾರಿಗಳ ಟಾರ್ಚರ್ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿ ಹೇಳಿದ್ದರು. ಆದರಂತೆ ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಶರಣಾಗಿದ್ದಾರೆ. ಪತಿಯ ಸಾವಿನಿಂದ ಅನ್ಯಾಯವಾಗಿದ್ದು, ನಮಗೆ ನ್ಯಾಯ ಬೇಕು ಎಂದು ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಪತ್ನಿ ಸೌಮ್ಯ ಹೇಳಿದ್ದಾರೆ.
ಐಟಿ ಅಧಿಕಾರಿಗಳ ತನಿಖೆಗೆ ಹೆದರಿ ಅ.12ರಂದು ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಡಾ.ಜಿ.ಪರಮೇಶ್ವರ್ ಅವರ ಅಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಹಾಗೂ ವಿಚಾರಣೆ ನಡೆಸಿರುವ ಕುರಿತು ರಮೇಶ್ ಪತ್ನಿ ಸೌಮ್ಯ ಅವರು ಐಟಿ ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.
ಐಟಿ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದರು. ಐಟಿ ಅಧಿಕಾರಿಗಳ ಕಿರುಕುಳದಿಂದ ಮನನೊಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ದಾಳಿಯಿಂದ ಸಾಕಷ್ಟು ಮಾನ ಮಾರ್ಯದೆ ಹೋಗಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ಬಗ್ಗೆ ಜ್ಞಾನ ಭಾರತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದೇನೆ ಎಂದು ಸೌಮ್ಯ ತಿಳಿಸಿದ್ದಾರೆ.
ನಮ್ಮ ಮನೆಗೆ ಐಟಿ ಅಧಿಕಾರಿಗಳೇ ಪತಿಯನ್ನು ಕರೆದುಕೊಂಡು ಬಂದು ಮತ್ತೆ ಕರೆದುಕೊಂಡು ಹೋಗಿದ್ದರು. ನಮ್ಮವರ ಫೋನ್ ಕೂಡ ಐಟಿ ಅಧಿಕಾರಿಗಳೇ ಇಟ್ಟಿಕೊಂಡಿದ್ದರು. ಅವರನ್ನು ಶನಿವಾರದವರೆಗೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮನೆಗೆ ಕರೆತಂದಿದ್ದ ವೇಳೆ ನಿಮ್ಮದೇನೂ ಇಲ್ಲ ನಿಮ್ಮ ಸಾಹೇಬರ ಬಗ್ಗೆ ಏನಾದ್ರೂ ಇದ್ದರೆ ಹೇಳಿ, ವ್ಯವಹಾರದ ಬಗ್ಗೆ ಕಾಲೇಜಿನ ಬಗ್ಗೆ ಎಂದು ಕೇಳಿದ್ದರು. ಇದಕ್ಕೆ ನಮ್ಮ ಪತಿ ನಾನು ಕೇವಲ ಟೈಪಿಸ್ಟ್ ನನ್ನ ಕೆಲಸ ನಾನು ಮಾಡ್ತಿದ್ದೆ ಅಷ್ಟೇ. ಅವರ ವ್ಯವಹಾರಗಳಿಗೂ ನನಗೂ ಸಂಬಂಧವಿಲ್ಲ, ನೀವು ಇದೇ ರೀತಿ ಟಾರ್ಚರ್ ಕೊಟ್ಟರೇ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತೇನೆ ಎಂದು ಐಟಿ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದರು. ಅದರಂತೆ ಅವರು ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದ್ದಾರೆ.
ಮಗನನ್ನು ನೆನೆದು ತಾಯಿ ಸಾವಿತ್ರಮ್ಮ ಕಣ್ಣೀರು ಇಡುತ್ತಿದ್ದರೇ. ತಂದೆ ಸಂಪಂಗಯ್ಯ ಮಗನ ಸಾವಿನ ನೋವಿನಿಂದ ಹೊರ ಬಂದಿಲ್ಲ. ಮಗನ ಸಾವಿನ ಬಗ್ಗೆ ಏನು ಹೇಳಲಿ. ನಾವು ಊರಿನಲ್ಲಿ ಇದ್ದೇವು ಅವರ ಜೀವನ ಅವರು ಮಾಡಿಕೊಂಡು ಇದ್ದರು. ನಾನು ಮಗಳ ಮನೆಯಲ್ಲಿ ಇದ್ದೆ. ಮಗ ನನ್ನನ್ನು ನೋಡಲು ಕರೆಯುತ್ತಿದ್ದಾನೆ ಎಂದು ಕೊಂಡಿದ್ದೇ. ಅಲ್ಲಿಗೆ ಹೋಗಿ ನೋಡಿದಾಗಲೇ ನನ್ನ ಮಗ ಹೆಣವಾಗಿ ನನಗೆ ಕಂಡ ಎಂದು ತಾಯಿ ಸಾವಿತ್ರಮ್ಮ ಕಣ್ಣೀರಿಟ್ಟರು.