– ಕೊಂದು ಎಸೆಯಿರಿ ಎಂದಿದ್ದ ಪಾಕ್!
– ಉಗ್ರರಿಗೆ ಹೆದರಿ ಸೇನೆ ತೊರೆಯುತ್ತಿರೋ ಪಾಕ್ ಯೋಧರು!
ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯಿಂದ (Baloch Liberation Army) ಹೈಜಾಕ್ ಆಗಿದ್ದ ಪಾಕಿಸ್ತಾನದ (Pakistan) ಜಾಫರ್ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಪುಲ್ವಾಮ ಮಾದರಿ ದಾಳಿಯಲ್ಲಿ ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ರೈಲು ಹೈಜಾಕ್ ಬಳಿಕ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಬೇಡಿಕೆಗಳನ್ನು ಈಡೇರಿಸಲು 48 ಗಂಟೆಗಳ ಸಮಯ ನೀಡಲಾಗಿತ್ತು. ಪಾಕಿಸ್ತಾನವು (Pakistan) ಮಾತುಕತೆಗೆ ನಿರಾಕರಿಸಿ ಮೊಂಡುತನ ಪ್ರದರ್ಶಿಸಿದ್ದಕ್ಕೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಬಿಎಲ್ಎ ವಕ್ತಾರ ಜೀಯಂಡ್ ಬಲೂಚ್ ಹೇಳಿದ್ದರು. ಇನ್ನೂ ಕಾರ್ಯಾಚರಣೆಯಲ್ಲಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ 12 ಸಾವನ್ನಪ್ಪಿದ್ದರು. ಈ ಬಲೂಚಿಸ್ತಾನ್ ಎಲ್ಲಿದೆ? ಬಲೂಚಿಸ್ತಾನ್ ಹಾಗೂ ಪಾಕ್ ನಡುವಿನ ಸಂಘರ್ಷವೇನು? ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ಉದ್ದೇಶವೇನು ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬಲೂಚಿಸ್ತಾನ್ ಎಲ್ಲಿದೆ?
ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನವನ್ನು ಈ ಹಿಂದೆ ಕಲಾತ್ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ 11, 1947 ರಂದು ಬ್ರಿಟಿಷ್ ಮೇಲ್ವಿಚಾರಣೆಯಲ್ಲಿ ಕಲಾತ್ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದಕ್ಕೆ ಸಹಿ ಹಾಕಿ, ಕಲಾತ್ನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲಾಯಿತು. ಆದರೆ ಅದರ ಸ್ವಾತಂತ್ರ್ಯವು ಅತ್ಯಂತ ಅಲ್ಪಕಾಲಿಕವಾಗಿತ್ತು. ಮಾರ್ಚ್ 27, 1948 ರಂದು, ಪಾಕಿಸ್ತಾನವು ಬಲೂಚಿಸ್ತಾನವನ್ನು ಆಕ್ರಮಿಸಿಕೊಂಡಿತು.
ಪಾಕ್ ಜೊತೆ ವಿಲೀನಕ್ಕೆ ಏಕೆ ವಿರೋಧ?
ಏಕೀಕರಣದ ನಂತರ ಪಾಕ್ ತೆಗೆದುಕೊಂಡ ಮಿಲಿಟರಿ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಬಲೂಚಿಸ್ತಾನ ಕಡಿಮೆ ಪ್ರಭಾವವನ್ನು ಹೊಂದಿದೆ. ಅದರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಲೂಚ್ನ ಜನ ಪಾಕ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಏನಿದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ?
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್ಎ) 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು, ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸ್ಥಾಪನೆಗೊಳ್ಳುವ ಮುನ್ನವೇ ಪ್ರತ್ಯೇಕ ಬಲೂಚಿಸ್ತಾನ ಬೇಕು ಎಂಬ ಬೇಡಿಕೆ ಇತ್ತು. 2000ನೇ ಇಸವಿಯಲ್ಲಿ ಪಾಕ್ ಆಡಳಿತದ ವಿರುದ್ಧ ಸರಣಿ ಬಾಂಬ್ ಸ್ಪೋಟಿಸಿ ಬಲೂಚಿಸ್ತಾನದ ಬೇಡಿಕೆ ಮುಂದಿರಿಸಿದಾಗ ಬಿಎಲ್ಎ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಿತ್ತು.
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸುತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯವು ಭೌಗೋಳಿಕವಾಗಿ ಸ್ವಲ್ಪ ದೊಡ್ಡ ಗಾತ್ರ ಹೊಂದಿದ್ದು,ಈ ಪ್ರಾಂತ್ಯವು ಅನಿಲ, ಖನಿಜ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿ, ಬಿಎಲ್ಎ ಹೊರತಾಗಿ ಇನ್ನೂ ಕೆಲವು ಜನಾಂಗೀಯ ಬಂಡುಕೋರ ಸಂಘಟನೆಗಳೂ ಇವೆ. ಬಲೂಚಿಸ್ತಾನದ ಬೆಟ್ಟ, ಪವರ್ತ ಪ್ರದೇಶಗಳು ಬಂಡುಕೋರರಿಗೆ ಸುರಕ್ಷಿತ ತಾಣವಾಗಿವೆ.
ಸಕ್ರಿಯವಾಗಿರುವ ಬಿಎಲ್ಎ ಆಜಾದ್ ಬಣ
ಬಿಎಲ್ಎ ಬಂಡುಕೋರ ಸಂಘಟನೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಕ್ರಿಯವಾಗಿದೆ. 2022ರಲ್ಲಿ ಪಾಕ್ ಸೇನೆ ಮತ್ತು ನೌಕಾ ನೆಲೆಗಳ ಮೇಲೆ ದಾಳಿ ನಡೆಸಿ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿತ್ತು. ಅಲ್ಲದೇ ಕರಾಚಿಯ ವಿವಿಯಲ್ಲಿ ಚೀನೀಯರ ಮೇಲೆ ದಾಳಿ ನಡೆಸಿತ್ತು. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಭದ್ರತಾ ಪಡೆ ಹಾಗೂ ಇತರೆ ಸೇನಾ ನೆಲೆಗಳ ಮೇಲೆ ಬಿಎಲ್ಎ ಪದೇಪದೆ ದಾಳಿ ನಡೆಸುತ್ತಿರುತ್ತದೆ. ಕರಾಚಿ ಬಂದರನ್ನೂ ಗುರಿಯಾಗಿಟ್ಟುಕೊಂಡು ಬಿಎಲ್ಎ ದಾಳಿ ನಡೆಸಿದ್ದು ಇದೆ. ಮುಂದುವರೆದು ಈಗ ಮಹಿಳಾ ಸೂಸೈಡ್ ಬಾಂಬರ್ಗಳನ್ನೂ ಬಿಎಲ್ಎ ಕಣಕ್ಕಿಳಿಸಿದೆ.
ಪಾಕ್ ಚೀನಾ ಸಂಬಂಧಕ್ಕೆ ಬಿಎಲ್ಎ ಅಸಮಾಧಾನ
ಪಾಕಿಸ್ತಾನ ಸೇನೆ ಹಾಗೂ ಚೀನಾ ಹಿತಾಸಕ್ತಿ ವಿಚಾರದಲ್ಲಿ ಬಲೂಚ್ ಬಂಡುಕೋರರಿಗೆ ಸಹಮತ ಇಲ್ಲ. ಪಾಕಿಸ್ತಾನದ ಗ್ವಾದರ್ನ್ನು ಚೀನಾಕ್ಕೆ ಬಿಟ್ಟುಕೊಟ್ಟ ವಿಚಾರದಲ್ಲಿ ಬಲೂಚ್ ಬಂಡುಕೋರರ ವಿರೋಧ ಇದೆ. ಇಲ್ಲಿ ಬಂದರು ನಿರ್ಮಾಣ ನಡೆಯುತ್ತಿದ್ದು, ಆ ಭಾಗದಲ್ಲಿ ಅವರು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇನ್ನೂ ಬಿಎಲ್ಎ ಬಂಡುಕೋರರು ಇರಾನ್ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಬಲೂಚಿಸ್ತಾನ್ ಖನಿಜ ಸಂಪತ್ತಿಗೆ ಹೆಸರುವಾಸಿ
ಪಾಕಿಸ್ತಾನದ ಮಟ್ಟಿಗೆ ಬಲೂಚಿಸ್ತಾನ ಉತ್ತಮ ಆದಾಯ ತರುವ ಪ್ರದೇಶವಾಗಿದೆ. ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಮೂಲಕ ಚೀನಾ ಈ ಪ್ರದೇಶದಲ್ಲಿ 65 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಬೆಲ್ಸ್ ಆಂಡ್ ರೋಡ್ ಉಪಕ್ರಮದ ಭಾಗವಾಗಿ ಜಾರಿಯಾಗಿದೆ. ಈ ಪ್ರಾಂತ್ಯದಲ್ಲಿ ಬ್ಯಾರಿಕ್ ಗೋಲ್ಡ್ಗೆ ಸೇರಿದ ರೇಕೊ ಡಿಕ್ ಸೇರಿ ಹಲವು ಗಣಿಗಾರಿಕೆ ಯೋಜನೆಗಳಿವೆ. ಈ ಪ್ರಾಂತ್ಯದಲ್ಲೇ ಜಗತ್ತಿನ ಅತಿದೊಡ್ಡ ಚಿನ್ನ ಹಾಗೂ ತಾಮ್ರದ ಗಣಿ ಇದೆ. ಚೀನಾ ಕೂಡ ಇಲ್ಲಿಂದ ಚಿನ್ನ ಹಾಗೂ ತಾಮ್ರದ ಗಣಿಗಾರಿಕೆ ನಡೆಸುತ್ತಿದೆ.
ಬಲೂಚಿಸ್ತಾನ್ ಸ್ವಾತಂತ್ರ್ಯಕ್ಕೆ ಬಿಎಲ್ಎ ಪಣ
ಕಳೆದುಹೋದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಬಲೂಚಿಸ್ತಾನ ಇನ್ನೂ ಹೋರಾಡುತ್ತಿದೆ. ರಾಜಕುಮಾರ ಅಬ್ದುಲ್ ಕರೀಮ್ನಿಂದ ನವಾಬ್ ಖೈರ್ ಬುಕ್ಷ್ ಮರ್ರಿ ಸೇರಿದಂತೆ ಹಲವಾರು ಬಲೂಚಿಸ್ತಾನದ ನಾಯಕರು ಬಲೂಚಿಸ್ತಾನವನ್ನು ಪಾಕಿಸ್ತಾನದೊಂದಿಗೆ ವಿಲೀನ ಮಾಡಿರುವುದನ್ನು ʻಆಕ್ರಮಣʼ ಎಂದು ಕರೆದಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಈ ಸ್ವಾಧೀನವನ್ನು ಇಸ್ಲಾಮಿಕ್ ಸಹೋದರತ್ವದ ವಿಲೀನ ಎಂದು ಹೇಳಿಕೊಳ್ಳುತ್ತದೆ.
1948 ರಿಂದ ವಿಲೀನ ಮಾಡಿರುವುದರ ವಿಚಾರಕ್ಕೆ ಹಿಂಸಾಚಾರಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಬಲೂಚಿಸ್ತಾನದಲ್ಲಿ ಐದು ವಿಭಿನ್ನ ದಂಗೆಗಳು ನಡೆದಿವೆ. 1948 ರಲ್ಲಿ ಆರಂಭಿಕ ದಂಗೆಯ ನಂತರ, ಬಲೂಚಿಸ್ತಾನದವರು ಕ್ರಮವಾಗಿ 1958, 1963-69, 1973-77 ರಲ್ಲಿ ಮೂರು ಬಾರಿ ಪಾಕ್ ವಿರುದ್ಧ ದಂಗೆಗಳು ನಡೆದಿವೆ. 1990 ರ ದಶಕದ ಅಂತ್ಯದಲ್ಲಿ, ದಿ.ನವಾಬ್ ಖೈರ್ ಬುಕ್ಷ್ ಮಾರಿ ನಿರ್ದೇಶನದ ಮೇರೆಗೆ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನದ ಐದನೇ ಹೋರಾಟ ಆರಂಭವಾಯಿತು. ಆಗಸ್ಟ್ 2006 ರಲ್ಲಿ ಹಿರಿಯ ಬಲೂಚ್ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಹತ್ಯೆಯ ನಂತರ, ಹಿಂಸಾಚಾರವು ಬಲೂಚಿಸ್ತಾನದಾದ್ಯಂತ ವ್ಯಾಪಿಸಿತು. ಬುಗ್ತಿ ಅವರ ಮರಣದ ನಂತರ, ಸ್ವತಂತ್ರ ರಾಜ್ಯಕ್ಕಾಗಿ ಬೆಂಬಲದ ಅಲೆ ಹೆಚ್ಚಾಯಿತು.
ದಂಗೆ ನಿಯಂತ್ರಣಕ್ಕೆ ಪಾಕ್ನಿಂದ ಕೊಂದು ಎಸೆಯಿರಿ ನೀತಿ
2009 ರಲ್ಲಿ ದಂಗೆ ನಿಯಂತ್ರಣಕ್ಕೆ ಪಾಕಿಸ್ತಾನ ಸರ್ಕಾರವು ʻಕೊಂದು ಎಸೆಯಿರಿʼ ಎಂಬ ನೀತಿಯನ್ನು ಜಾರಿಗೆ ತಂದಿತು. 2009 ರಿಂದ ಹಲವಾರು ರಾಜಕೀಯ ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ನ್ಯಾಯಾಲಯದ ಹೊರಗೆ ಕೊಲ್ಲಲಾಗಿದೆ. 2014ರ ಅಂತ್ಯದ ವೇಳೆಗೆ, ಸರ್ಕಾರದ ದೌರ್ಜನ್ಯಗಳನ್ನು ಟೀಕಿಸಲು ಪ್ರಯತ್ನಿಸಿದವರನ್ನು ಪಾಕಿಸ್ತಾನಿ ಸೈನಿಕರು ಬೇಟೆಯಾಡಿದ್ದರು. ಇದಾದ ಬಳಿಕ ಹೋರಾಟದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು.
ಬಲೂಚಿಸ್ತಾನದ ಮಾನವ ಹಕ್ಕುಗಳ ಆಯೋಗದ 2021 ರ ವಾರ್ಷಿಕ ವರದಿ ಪ್ರಕಾರ, ಪಾಕ್ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಬಲೂಚಿಸ್ಥಾನದಲ್ಲಿ 47 ನಕಲಿ ಎನ್ಕೌಂಟರ್ಗಳನ್ನು ನಡೆಸಿದ್ದು, 366 ಜನರು ಸಾವನ್ನಪ್ಪಿದ್ದಾರೆ. 442 ಜನರು ಕಾಣೆಯಾಗಿದ್ದಾರೆ. ಅವರಲ್ಲಿ 170 ಜನರನ್ನು ಚಿತ್ರಹಿಂಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದೆಲ್ಲದರ ವಿರುದ್ಧ ತಿರುಗಿ ಬಿದ್ದಿರುವ ಬಿಎಲ್ಎ ಈಗ ಪಾಕ್ನ್ನು ಸೆದೆ ಬಡಿಯಲು ಮುಂದಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ದಾಳಿಗಳಿಂದ ಪಾಕ್ನ ಸೈನಿಕರು ಸಹ ಸೇನೆಯನ್ನು ತೊರೆಯುತ್ತಿದ್ದಾರೆ. ಒಂದೇ ವಾರದಲ್ಲಿ ಸುಮಾರು 2500 ಜನ ಯೋಧರು ಸೇನೆ ತೊರೆದಿದ್ದಾರೆ ಎಂದು ವರದಿಯಾಗಿದೆ.