ವಾಷಿಂಗ್ಟನ್: ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಭಾರತದ ಮೇಲೆ ದಾಳಿ ನಡೆಸುವ ಸಂಭವವಿದ್ದು, ಈ ಕುರಿತು ಎಚ್ಚರಿಕೆಯಿಂದಿರಿ ಎಂದು ಅಮೆರಿಕ ಸೂಚಿಸಿದೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗಿನಿಂದ ಭಯೋತ್ಪಾದಕ ಗುಂಪುಗಳು ಚುರುಕಾಗಿವೆ. ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಅಮೆರಿಕ ತಿಳಿಸಿದೆ.
ಕಾಶ್ಮೀರದ ಕುರಿತ ಭಾರತದ ನಿರ್ಧಾರದಿಂದ ಭಯೋತ್ಪಾದಕರು ಹಾಗೂ ಪಾಕಿಸ್ತಾನ ಗಡಿಯಾಚಿಗಿನ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. ಈ ಕುರಿತು ಅನೇಕರಿಗೆ ಆತಂಕವಿದೆ ಎಂದು ನಾನು ಭಾವಿಸಿದ್ದೇನೆ. ಚೀನಾ ಸಹ ಈ ರೀತಿಯ ಸಂಘರ್ಷವನ್ನು ಬಯಸುತ್ತಿದೆ. ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬುದರ ಕುರಿತು ನನಗೆ ಅರಿವಿಲ್ಲ. ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಂಡಾಲ್ ಶ್ರೀವರ್ ವಾಷಿಂಗ್ಟನ್ ಜನತೆಗೆ ತಿಳಿಸಿದರು.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಕಾಶ್ಮೀರದ ವಿಷಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಕುರಿತ ಪ್ರಶ್ನೆಗೆ ಶ್ರೀವರ್ ಪ್ರತಿಕ್ರಿಯಿಸಿದರು. ಇದು ಹೆಚ್ಚಾಗಿ ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲವಾಗಿದೆ ಎಂದು ಶ್ರೀವರ್ ಹೇಳಿದರು.
ಚೀನಾ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲೇ ಬೆಂಬಲಿಸಿದೆ. ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಚರ್ಚಿಸಬೇಕು ಎಂಬ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿವೆ. ಇದನ್ನು ಚೀನಾ ಬೆಂಬಲಿಸುತ್ತಿದೆ. ಆದರೆ ಈ ವಿಚಾರ ಇದೀಗ ಇನ್ನೂ ಹೆಚ್ಚು ಚುರುಕಾಗಿದೆಯೇ ಎಂಬುದರ ಕುರಿತು ನನಗೆ ತಿಳಿದಿಲ್ಲ ಎಂದು ಪೆಂಟಗನ್ನ ಉನ್ನತ ಅಧಿಕಾರಿ ತಿಳಿಸಿದರು.
ಚೀನಾ ಪಾಕಿಸ್ತಾನದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಅಲ್ಲದೆ ಅವರು ಭಾರತಕ್ಕೆ ಹೆಚ್ಚು ಸ್ಪರ್ಧೆ ಒಡ್ಡುತ್ತಿದ್ದಾರೆ. ಆದರೆ ಭಾರತವು ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತದೆ ಎಂದು ಅವರು ತಿಳಿಸಿದರು.
ಶ್ರೀವನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಇತ್ತೀಚಿನ ಭೇಟಿಯನ್ನು ಉಲ್ಲೇಖಿಸಿದ್ದು, ಈ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನಾವು ಚೀನಾದೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದೇವೆ. ಭಾರತ ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತದೆ. ಆದರೆ ಇದರೊಂದಿಗೆ ಕಾಳಜಿ ಹಾಗೂ ಸ್ಪರ್ಧೆ ಹೆಚ್ಚುತ್ತಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಕಾಶ್ಮೀರ ಸೇರಿದಂತೆ ಇಂತಹ ವಿವಿಧ ವಿಷಯಗಳ ಕುರಿತು ಯೋಚಿಸುತ್ತಿದ್ದೇನೆ. ಚೀನಾ ಪಾಕಿಸ್ತಾನದತ್ತ ವಾಲುತ್ತಿದೆ ಎಂದು ಶ್ರೀವರ್ ವಿವರಿಸಿದರು.