ಮುಂಬೈ: ಪದ್ಮಾವತಿ ಚಿತ್ರ ಶುರುವಾದಗಿಂದ ಸಾಕಷ್ಟು ತೊಂದರೆಗಳನ್ನು ಎದರಿಸುತ್ತಾ ಬರುತ್ತಿದೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪದ್ಮಾವತಿ ಚಿತ್ರ ಸಾಕಷ್ಟು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ರಜಪೂತ ಕರ್ಣಿ ಸೇನಾ ಈ ಮೊದಲು ಜನವರಿ ತಿಂಗಳಲ್ಲಿ ಚಿತ್ರದ ಸೆಟ್ ಮೇಲೆ ದಾಳಿ ನಡೆಸಿದ್ದರು. ಆದರೆ ಈಗ ಹಲವಾರು ಸಂಘಟನೆಗಳಿಂದ ದೀಪಿಕಾ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.
ರಜಪೂತರು ಯಾವತ್ತೂ ಹೆಣ್ಣಿನ ಮೇಲೆ ಕೈ ಮಾಡುವುದಿಲ್ಲ. ಆದರೆ ಸಂದರ್ಭ ಬಂದಾಗ ಲಕ್ಷ್ಮಣ ಶೂರ್ಪಣಕಿಗೆ ಮಾಡಿದ ರೀತಿಯನ್ನು ನಾವು ದೀಪಿಕಾಗೆ ಮಾಡಬೇಕಾಗುತ್ತದೆ ಎಂದು ರಜಪೂತ್ ಕರ್ಣಿ ಸೇನೆಯ ಮಹಿಪಾಲ್ ಸಿಂಗ್ ಮಕ್ರಾನಾ ತಿಳಿಸಿದ್ದಾರೆ.
ಇನ್ನೊಂದಡೆ ರಜಪೂತ್ ಸಮುದಾಯದ ಹಿರಿಯ ನಾಯಕರಾದ ಲೋಕೆಂದ್ರ ಸಿಂಗ್ ಕಾಲ್ವಿ ಅವರು ಡಿಸೆಂಬರ್ 1 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ನಾವು ಲಕ್ಷಾಂತರ ಮಂದಿ ಸೇರುತ್ತೇವೆ. ನಮ್ಮ ಪೂರ್ವಜರು ಈ ಇತಿಹಾಸವನ್ನು ರಕ್ತದಲ್ಲಿ ಬರೆದಿದ್ದರು. ನಾವು ಈ ಇತಿಹಾಸಕ್ಕೆ ಮಸಿ ಬಳಿಯುವಂತಹ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಮೀರತ್ ನ ನಾಯಕರದ ಠಾಕೂರ್ ಅಭೀಷೇಕ್ ಸೋಮ್ ಅವರು ದೀಪಿಕಾ ತಲೆಯನ್ನು ತೆಗೆಯುವರಿಗೆ 5 ಕೋಟಿ ರೂ. ನೀಡುತ್ತೇವೆ ಎಂದು ಹೇಳಿದ್ದಾರೆ ಅಂತ ವರದಿಯಾಗಿದೆ.
ಈ ಎಲ್ಲಾ ಸುದ್ದಿ ಹಾಗೂ ಬೆದರಿಕೆಗಳಿಗೆ ಪ್ರತಿಕ್ರಿಯಿಸಿದ ದೀಪಿಕಾ ಈ ಸಂದರ್ಭದಲ್ಲಿ ನಾನು ಒಬ್ಬ ಹೆಣ್ಣಾಗಿ, ಕಲಾವಿದೆಯಾಗಿ ಹಾಗೂ ದೇಶದ ಪ್ರಜೆಯಾಗಿ ನಾನು ಕೋಪಗೊಂಡಿದ್ದೇನೆ, ನಿರಾಶಿತಳಾಗಿದ್ದೇನೆ. ನಾನು ಈಗ ಯಾರಿಗೂ ಹೆದರುವುದಿಲ್ಲ. ಭಯ ಎಂಬ ಭಾವನೆ ನನಲ್ಲಿ ಇಲ್ಲ. ನಾನು ಅದನ್ನು ಗುರುತಿಸುವುದಿಲ್ಲ ಎಂದು ದೀಪಿಕಾ ಪ್ರತಿಕ್ರಿಯಿಸಿದ್ದಾರೆ.
ಚಿತ್ರವನ್ನು ನೋಡದೇ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ ನಾನು ಹೇಳುತ್ತಿದ್ದೇನೆ, ಈ ಚಿತ್ರವನ್ನು ನೋಡಿದ ಮೇಲೆ ಪ್ರತಿಯೊಬ್ಬ ಭಾರತಿಯರು ಹೆಮ್ಮೆ ಪಡುತ್ತಾರೆ. ರಾಣಿ ಪದ್ಮಾವತಿ ಜೀವನ ಪಯಣವನ್ನು ತೋರಿಸುತ್ತಿದ್ದಕ್ಕೆ ನಮಗೆ ಖುಷಿಯಾಗುತ್ತಿದೆ. ಆಕೆಯ ಜೀವನ ಚರಿತ್ರೆಯನ್ನು ಭಾರತದಲ್ಲದೇ ಇಡೀ ವಿಶ್ವಕ್ಕೆ ತಿಳಿಸಬೇಕು ಎಂದು ದೀಪಿಕಾ ತಿಳಿಸಿದ್ದಾರೆ.