ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (DJ Chakraborty) ಮತ್ತು ನಟ, ನಿರ್ದೇಶಕ ನಾಗಶೇಖರ್ (Nagasekhar) ಒಟ್ಟಾಗಿ ‘ಪಾದರಾಯ’ (Padaraya) ಸಿನಿಮಾ ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಗಾಯಕಿ ಮಂಗ್ಲಿ (Mangli) ನಾಯಕಿಯನ್ನಾಗಿಯೂ ಆಯ್ಕೆ ಮಾಡಿದ್ದರು. ಈ ಸಿನಿಮಾ ಮಾಡುವುದಕ್ಕಾಗಿ ನಾಗಶೇಖರ್ ವ್ರತ ಕೂಡ ಮಾಡುತ್ತಿದ್ದರು. ಇದೀಗ ಎಲ್ಲವೂ ಆದಂತೆ ನಡೆಯುತ್ತಿಲ್ಲ. ಹಣಕಾಸಿನ ಅವ್ಯವಹಾರದ ಕಾರಣದಿಂದಾಗಿ ನಿರ್ದೇಶಕ ಡಿ.ಜೆ.ಚಕ್ರವರ್ತಿ ಸಿನಿಮಾದಿಂದ ಹೊರ ನಡೆದಿದ್ದಾರೆ. ತಾವು ನಾಗಶೇಖರ್ ಜೊತೆ ಸಿನಿಮಾ ಮಾಡುತ್ತಿಲ್ಲ ಎಂದು ಘೋಷಿಸಿದ್ದಾರೆ.
ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಚಕ್ರವರ್ತಿ, ‘ಪಾದರಾಯ ಸಿನಿಮಾ ಮಾಡುವ ಎಲ್ಲ ತಯಾರಿ ಮಾಡಿಕೊಂಡಿದ್ದೆ. ಯಾರಿಗೂ ಅಡ್ವಾನ್ಸ್ ಕೊಡದೇ ಇದ್ದರೂ, ಎಲ್ಲರನ್ನೂ ಒಟ್ಟಾಗಿಸಿಕೊಂಡು ಸಿನಿಮಾ ಕೆಲಸ ಶುರು ಮಾಡಿದ್ದೆ. ಆದರೆ, ನಾಗಶೇಖರ್ ಮತ್ತು ಅವರಿಗೆ ಗೊತ್ತಿರುವ ಕೆಲವರು ಸಿನಿಮಾ ಹೆಸರಿನಲ್ಲಿ ಹಣ ಮಾಡಲು ಶುರು ಮಾಡಿರುವ ವಿಷಯ ಗಮನಕ್ಕೆ ಬಂತು. ಈ ಸಿನಿಮಾ ಹೆಸರಿನಲ್ಲಿ ಅವರು ಸಾಲ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಯಿತು. ಒಬ್ಬ ನಿರ್ದೇಶಕನ ಗಮನಕ್ಕೆ ಬಾರದೇ ಏನೆಲ್ಲ ವ್ಯವಹಾರಗಳು ಆಗುತ್ತಿರುವುದು ಗಮನಿಸಿ, ನಾನು ಆ ಸಿನಿಮಾದಿಂದ ಆಚೆ ಬಂದೆ’ ಎನ್ನುತ್ತಾರೆ.
‘ಪಾದರಾಯ ಸಿನಿಮಾ ಹೆಸರಿನಲ್ಲಿ ಏನೆಲ್ಲ ವ್ಯವಹಾರಗಳು ಆಗಿವೆ ಮತ್ತು ನಾಗಶೇಖರ್ ಮತ್ತು ತಂಡ ಮಾಡಿರುವ ಕೆಲಸಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆ ದೂರು ನೀಡಿದ್ದೇನೆ. ಅವರು ಮಾಡಿರುವ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ನಾನು ಸ್ಪಷ್ಟ ಪಡಿಸಬೇಕಿತ್ತು. ಅಲ್ಲದೇ, ನಾನು ನನ್ನ ಕಥೆಯನ್ನು ಭದ್ರಪಡಿಸಿಕೊಳ್ಳಬೇಕಿತ್ತು. ಹಾಗಾಗಿ ದೂರು ಕೊಟ್ಟಿದ್ದೇನೆ’ ಎನ್ನುತ್ತಾರೆ ಚಕ್ರವರ್ತಿ.
ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ.