ನವದೆಹಲಿ: ಪ್ರತಿಭಟನೆಯಿಂದ ಸಾಧಿಸಲಾಗದ್ದು, ಚುನಾವಣೆ ಭಯದಿಂದ ಸಾಧಿಸಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಕೃಷಿ ಕಾನೂನು ವಾಪಸ್ ಪಡೆದಿರುವ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲಾಗದೋ ಅದನ್ನು ಮುಂಬರುವ ಚುನಾವಣೆಯ ಭಯದಿಂದ ಸಾಧಿಸಬಹುದು. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನ ಮಂತ್ರಿಯವರ ಘೋಷಣೆಯು ಯಾವುದೇ ನೀತಿಯ ಬದಲಾವಣೆ ಅಥವಾ ಹೃದಯದ ಬದಲಾವಣೆಯಿಂದ ಪ್ರೇರಿತವಾಗಿಲ್ಲ. ಇದು ಚುನಾವಣೆಯ ಭಯದಿಂದ ಪ್ರಚೋದಿಸಲ್ಪಟ್ಟಿದೆ. ಅದೇನೇ ಇರಲಿ, ಇದು ರೈತರಿಗೆ ಮತ್ತು ಈ ಕಾನೂನುಗಳ ವಿರುದ್ಧ ಅಚಲವಾಗಿ ನಿಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ವಿಜಯವಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್
ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ. ರೈತರು ಹೋರಾಟವನ್ನು ಕೈ ಬಿಡಿ ಎಂದು ಮೋದಿ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ
ಇತ್ತೀಚೆಗೆ ಭಾರೀ ಚರ್ಚೆಯಾಗಿ ವಿವಾದಕ್ಕೆ ತುತ್ತಾಗಿದ್ದ ಕೃಷಿ ಸಂಬಂಧಿತ ಮೂರೂ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುವೆ. ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.