ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಮನೆಯೊಂದರ ಮಾಲೀಕ ಬಾಡಿಗೆದಾರರಿಗೆ ಮನೆ ಖಾಲಿ ಮಾಡಿ ಎಂದು ಎಷ್ಟೇ ಹೇಳಿದರೂ ಸಹ ಮನೆ ಖಾಲಿ ಮಾಡಿರಲಿಲ್ಲ. ಆ ಮಾಲೀಕನಿಗೆ ಮಳೆ ವರದಾನವಾಗಿ ಬಂದು ಮನೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಮನೆ ಒಳಭಾಗಕ್ಕೆ ಹೋಗಿ ನೋಡಿದಾಗ ಮನೆ ಮಾಲೀಕನಿಗೆ ಕಾದಿತ್ತು ಒಂದು ಶಾಕ್.
ಮನೆಯನ್ನು ಬಾಡಿಗೆ ಕೊಡುವ ಮುನ್ನ ಬಾಡಿಗೆದಾರನ ಹಿನ್ನೆಲೆಯನ್ನು ಮಾಲೀಕನಾದವನು ವಿಚಾರಿಸಿಕೊಳ್ಳುತ್ತಾನೆ. ಒಂದು ವೇಳೆ ಹಿನ್ನೆಲೆ ವಿಚಾರಿಸಿಕೊಳ್ಳದೇ ಇದ್ರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.
ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಪವಿತ್ರರಾಜ್ ತಮ್ಮ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ ಮನೆಯನ್ನು ತಸ್ಲೀಮ್ ಹಾಗೂ ಆಕೆಯ 5 ಗಂಡು ಮಕ್ಕಳಿಗೆ ಬಾಡಿಗೆ ನೀಡಿದ್ದರು. ಅದ್ಯಾಕೋ ಏನು ಅನ್ನಿಸಿತೋ ಗೊತ್ತಿಲ್ಲ, ಬಾಡಿಗೆ ಕೊಟ್ಟು 1 ವರ್ಷವಾದ ಬಳಿಕ ಪವಿತ್ರರಾಜ್ ಮನೆ ಖಾಲಿ ಮಾಡುವಂತೆ ತಸ್ಲೀಮ್ ಹಾಗೂ ಆಕೆಯ ಮಕ್ಕಳಿಗೆ 2 ತಿಂಗಳಿನಿಂದ ಒತ್ತಾಯ ಮಾಡಿದ್ದಾರೆ. ಆದರೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಮನೆ ಖಾಲಿ ಮಾಡಿರಲಿಲ್ಲ. ಆದರೆ ಕಳೆದ 3 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆ ಮನೆಯ ಗೋಡೆ ಕುಸಿದು ಬಿದ್ದಿದೆ. ಹೀಗಾಗಿ ಮನೆಯ ಒಳಭಾಗಕ್ಕೆ ಹೋಗಿ ನೋಡಿದ ಪವಿತ್ರರಾಜ್ಗೆ ಕಂಡಿರುವುದು 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳು.
ಪವಿತ್ರರಾಜ್ ಬಾಡಿಗೆ ನೀಡಿದ್ದ ಮನೆಯ ಸ್ನಾನಗೃಹದ ಬಳಿ 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಬಳಿಕ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಮನೆಯಲ್ಲಿ ಇದ್ದ ಮಾದಕ ವಸ್ತು, ಮಾರಕಾಸ್ತ್ರಗಳೊಂದಿಗೆ ಮನೆಯಲ್ಲಿ ಇದ್ದ ನಾಲ್ವರು ಪುರುಷರು ತಮ್ಮ ತಾಯಿ ತಸ್ಲೀಮ್ರನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವಕ್ಕೂ ಮೊದಲೇ ಶುರುವಾಯ್ತು ಕಲ್ಲುತೂರಾಟ – ವಡೋದರಾದಲ್ಲಿ 13 ಮಂದಿ ಬಂಧನ
ಮನೆಯಲ್ಲಿ 12 ಅಡಿ ಸುರಂಗ ಮಾಡಿ, ಅದರಲ್ಲಿ ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳ ಶೇಖರಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪರಾರಿಯಾಗಿರುವವರು ಮನೆಯ ಬಳಿ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆಗ್ಗಾಗ್ಗೆ ಗಲಾಟೆಗಳನ್ನು ಮಾಡುತ್ತಿದ್ದರು. ನಮಗೆ ಅವರು ಇರುವವರೆಗೆ ಭಯದ ವಾತಾವರಣ ಇಲ್ಲಿ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಒಟ್ಟಾರೆ ಬಾಡಿಗೆ ಮನೆಯೊಂದರಲ್ಲಿ ಈ ರೀತಿ ಸುರಂಗ ಕೊರೆದು ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದೀಗ ಪರಾರಿಯಾಗಿರುವ ನಾಲ್ವರ ಶೋಧ ಕಾರ್ಯಕ್ಕೆ ಮಳವಳ್ಳಿ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಂದಿಗೆ ಚಕ್ಕಂದ – ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ASI