ಬೆಂಗಳೂರು: ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ ಪೆರುವಾಜೆ ಕ್ರಾಸ್ ಬಳಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು. ಈ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಚಂದ್ರು, ಉಪಾಧ್ಯಕ್ಷ ಸುಭಾಷ್, ಜಿಲ್ಲಾ ಯುವ ಮೋರ್ಚಾ ಖಂಜಾಂಚಿ ಯುವರಾಜ್ ಸೇರಿ ಐವರು ರಾಜೀನಾಮೆ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೂ ಪಕ್ಷದ ಚಟುವಟಿಕೆಗಳನ್ನು ಮಾಡುವುದಿಲ್ಲ. ಪ್ರವೀಣ್ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲೂ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ಪ್ರಾರಂಭವಾಗಿದ್ದು, ಬಿಜೆಪಿ ಅರಭಾವಿ ಮಂಡಲ ಸಾಮಾಜಿಕ ಜಾಲತಾಣ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಹಿಂದೆ ಎಲ್ಲಾ ಹಿಂದೂಪರ ಕಾರ್ಯಕರ್ತರ ಹತ್ಯೆಯಾದಾಗ ಕಠಿಣ ಕ್ರಮ ಜರುಗಿಸಿದ್ದೀರಿ ಎಂಬುದು ನಮ್ಮ ಕಣ್ಮುಂದೆ ಇದೆ. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿ ನೋಡಿ: ಕಟೀಲ್ ಶಪಥದ ಹಳೇ ವೀಡಿಯೋ ವೈರಲ್
ಮೈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾದ ಎನ್.ಆರ್ ಕ್ಷೇತ್ರದ ಅಧ್ಯಕ್ಷ ಲೋಹಿತ್ ಸೇರಿದಂತೆ ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾವು ಹೇಳಿ ಕೇಳಿ ಅಲ್ಪಸಂಖ್ಯಾತ ಸಮುದಾಯ ಹೆಚ್ಚಾಗಿರುವ ಎನ್.ಆರ್ ಕ್ಷೇತ್ರದಲ್ಲೆ ಪಕ್ಷ ಸಂಘಟಿಸಬೇಕಿರುವ ಕಾರಣ ನಮ್ಮ ಮನೆಗಳಲ್ಲೂ ಆತಂಕ ಹೆಚ್ಚಾಗಿದೆ. ಈ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಿಜೆಪಿ ಯುವಮೋರ್ಚ ಕಾರ್ಯಕರ್ತರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರಿಗೆ ಸಲ್ಲಿಸಿದ್ದಾರೆ. ಅಲ್ಲದೆ ಬಿಜೆಪಿ ರಾಜ್ಯ ಪ್ರಮುಖರ ವಿರುದ್ಧ ಯುವ ಮೋರ್ಚಾ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರಿನಲ್ಲೂ ಪ್ರವೀಣ್ ಹತ್ಯೆಗೆ ಆಕ್ರೋಶ ಹೊರ ಹಾಕಿ ಬಿಜೆಪಿ ಯುವ ಮೋರ್ಚ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಜಿಲ್ಲಾಧ್ಯಕ್ಷ ಸಂದೀಪ್ ಅರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಗಗನ್ ಕಡೂರು, ಉಪಾಧ್ಯಕ್ಷ ಸಚಿನ್, ಶಶಿ ಜಿಲ್ಲಾ ಕಾರ್ಯದರ್ಶಿ, ಮಂಡಲ ಅಧ್ಯಕ್ಷ ರಾಜೇಶ್, ಕಾಂಚನ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.