ಚಿಕ್ಕಮಗಳೂರು: ಬಿಜೆಪಿಯಿಂದ (BJP) ಕಾಂಗ್ರೆಸ್ (Congress) ಸೇರಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (Ct Ravi) ಆಪ್ತ ಹೆಚ್ಡಿ ತಮ್ಮಯ್ಯನ (HD Thammaiah) ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಅಸಮಾಧಾನದ ಹೊಗೆ ಮುಂದುವರಿದಿದೆ. ಹೆಚ್ಡಿ ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಮೂಲ ಕಾಂಗ್ರೆಸ್ಸಿಗರು ತಮ್ಮಯ್ಯ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಶನಿವಾರ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಮೂಲ ಕಾಂಗ್ರೆಸ್ ಮುಖಂಡರು ತಮ್ಮಯ್ಯಗೆ ಟಿಕೆಟ್ ಬೇಡವೇ ಬೇಡ ಎಂದು ಆಗ್ರಹಿಸಿದ್ದರು. ಈಗಾಗಲೇ ಕಳೆದ 2-3 ದಶಕಗಳಿಂದ ಪಕ್ಷಕ್ಕಾಗಿ ದುಡಿದ 6 ಜನ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಮೂಲ ಕಾಂಗ್ರೆಸ್ಸಿಗರು ನಿರ್ಣಯಕ್ಕೆ ಬಂದಿದ್ದರು. ಆದರೆ ಈ ವೇಳೆ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಕಾಂಗ್ರೆಸ್ ಕೆಪಿಸಿಸಿ ಸಂಯೋಜಕ ಪವನ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ಮಾಡಿದ್ದರು.
ತಮ್ಮಯ್ಯ ವಿರುದ್ಧದ ಅಸಮಾಧಾನದ ಹೊಗೆ ಇನ್ನು ಕೂಡಾ ಮುಂದುವರಿದಿದೆ. ಭಾನುವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಖರಾಯಪಟ್ಟಣದಲ್ಲಿ ಬಹಿರಂಗ ಸಭೆ ಸೇರಿರುವ 6 ಜನ ಟಿಕೆಟ್ ಆಕಾಂಕ್ಷಿಗಳು ಮತ್ತೆ ತಮ್ಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರಿಗೆ ತಾಲೂಕಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಚರ್ಚೆ ಮಾಡಲು ತೀರ್ಮಾನಿಸಿದ್ದಾರೆ. 6 ಜನ ಆಕಾಂಕ್ಷಿಗಳು ಕೂಡಾ ತಮ್ಮಯ್ಯ ವಿರುದ್ಧ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?
ಇತ್ತೀಚೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹತ್ತಾರು ಮುಖಂಡರು ನೂರಾರು ಕಾರ್ಯಕರ್ತರನ್ನು ಜೊತೆಗೆ ಕರೆತಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆದರೆ ಹೆಚ್ಡಿ ತಮ್ಮಯ್ಯ ಏಕಾಂಗಿಯಾಗಿ ಒಬ್ಬರೇ ಒಬ್ಬರು ಬಂದು ಪಕ್ಷ ಸೇರಿ, ಈಗ ಟಿಕೆಟ್ ಕೇಳುತ್ತಿದ್ದಾರೆ. ಅದರ ಅರ್ಥ ಏನೆಂದರೆ ಅವರು ಬಿಜೆಪಿಯ ಏಜೆಂಟ್. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಕ್ಕೆ ಅವರು ಬಿಜೆಪಿ ಸೇರಿದ್ದಾರೆ ಎಂದು ತಮ್ಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಹೀಗಾಗಿ ಅರ್ಜಿ ಹಾಕಿರುವ 6 ಜನರನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರು ಚಿಕ್ಕಮಗಳೂರು ರಾಜಕೀಯ ಬೇರೆ ರೀತಿ ಇರುತ್ತದೆ ಎಂದು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ